Sunday, September 8, 2024

Latest Posts

ನಂದನ್ ಪ್ರಭು ನಿರ್ದೇಶನದ”ಓರಿಯೋ'” ಚಿತ್ರೀಕರಣ ಮುಕ್ತಾಯ 

- Advertisement -

ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ ‘ಪ್ರೀತಿಯ ಲೋಕ’ ಹಾಗೂ ‘ಲವ್ ಈಸ್ ಪಾಯಸನ್’ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು “ಓರಿಯೋ”.

ಈಗಾಗಲೇ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವ ನಂದನಪ್ರಭು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ.
ಚಿತ್ರದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಳ್ಳಲು ಈಚೆಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಂದನಪ್ರಭು, “ಓರಿಯೋ” ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ಅರ್ಥವಿದೆ. ನಮ್ಮ ಚಿತ್ರಕ್ಕೆ ಇದೇ ಶೀರ್ಷಿಕೆ ಇಟ್ಟಿರುವ ಕಾರಣವೇನು? ಎಂದು ಚಿತ್ರ ನೋಡಿದಾಗ ಖಂಡಿತ ಗೊತ್ತಾಗುತ್ತದೆ. ಕಳೆದ ನವೆಂಬರ್‌ನಲ್ಲಿ ಶೂಟಿಂಗ್ ಆರಂಭಿಸಿ ಸಕಲೇಶಪುರ, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ 2 ಹಾಡು ಹಾಗೂ 2 ಸಾಹಸ ದೃಶ್ಯಗಳ ಶೂಟಿಂಗ್ ಮುಗಿಸಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿಯಿದೆ. ತುಂಬಾ ಹಿಂದೆ ನಾನು, ಎಪಿಜೆ ಅಬ್ದುಲ್ ಕಲಾಂ(ರಾಷ್ಟಪತಿ ಆಗುವುದಕ್ಕಿಂತ ಮುಂಚೆ) ಅವರ ಕಾರು ಚಾಲಕನಾಗಿದ್ದೆ. ಅವರು ನನ್ನೊಂದಿಗೆ ಮಾತಾಡುವಾಗ ಒಂದಷ್ಟು ವಿಷಯಗಳನ್ನು ಹೇಳುತ್ತಿದ್ದರು, ಆ ಮಾತುಗಳೇ ನಾನು ಈ ಚಿತ್ರ ಮಾಡಲು ಸ್ಪೂರ್ತಿ. ನಾವು ಎಚ್ಚರ ತಪ್ಪಿದರೆ, ಮುಂದೊಂದು ದಿನ ಹೀಗೂ ಆಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡುವಂಥ ವಿಭಿನ್ನ ಕಥಾಹಂದರ ಈ ಚಿತ್ರದಲ್ಲಿದೆ. ಹಾರರ್ ಜೊತೆಗೆ ಪರಿಸರ ಕಾಳಜಿಯ ಅಂಶವೂ ಇದರಲ್ಲಿದೆ. ಈಗ ಪೋಸ್ಟರಿನಲ್ಲಿ ತೋರಿಸಿರುವ ೫ ಹೆಡೆಯ ಹಾವಿಗೂ ಚಿತ್ರಕಥೆಗೂ ಸಂಬಂಧವಿದೆ ಎಂದು ನಂದನ್ ಪ್ರಭು ಹೇಳಿದರು.

ಚಿತ್ರದ ಮತ್ತೊಬ್ಬ ನಾಯಕ ಸುಚಿತ್ ಮಂಜುನಾಥ್ ಮಾತನಾಡಿ, ರಥಾವರ, ವೈರ ಹಾಗೂ ಪುಟಾಣಿ ಪಂಟ್ರು ಚಿತ್ರಗಳ ನಂತರ ನಾನು ಅಭಿನಯಿಸುತ್ತಿರುವ ಚಿತ್ರವಿದು. ಇದರಲ್ಲಿ ನಾನು ಒಬ್ಬ ಸಾಮಾನ್ಯ ಕ್ಯಾಬ್‌ ಡ್ರೈವರ್ ಪಾತ್ರ ನಿರ್ವಹಿಸಿದ್ದು, ಒಂದು ಸಂದರ್ಭದಲ್ಲಿ ಕಾಡಿಗೆ ಹೋಗಬೇಕಾಗುತ್ತದೆ. ಅಲ್ಲಿಂದಲೇ ಕಥೆ ಪ್ರಾರಂಭವಾಗುತ್ತದೆ, ಯುಕ್ತ ನನ್ನ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಎಂದರು.

ಚಿತ್ರದಲ್ಲಿ ಕಾಮಿಡಿ ಪಾತ್ರ ನಿರ್ವಹಿಸಿರುವ ಚಕ್ರವರ್ತಿ ಮಾತನಾಡಿ ತಾವು ಕೂಡ ಕ್ಯಾಬ್ ಚಾಲಕನ ಪಾತ್ರ ಮಾಡಿರುವುದಾಗಿ ಹೇಳಿದರು.

ಸಂಗೀತ ನಿರ್ದೇಶಕ ಸಾಯಿಕಿರಣ್ ಚಿತ್ರದ ಬಗ್ಗೆ ಮಾತನಾಡುತ್ತ, ಇದು ನನ್ನ ಸಂಗೀತ ನೀಡುತ್ತಿರುವ 6 ನೇ ಚಿತ್ರ. ಇತ್ತೀಚೆಗಷ್ಟೇ ಪಾರ್ಟಿಸಾಂಗ್ ವೊಂದನ್ನು ಚಿತ್ರೀಕರಿಸಿದ್ದೇವೆ ಎಂದು ಹೇಳಿದರು.

ಸದ್ಯ ಚಿತ್ರದ ಎಡಿಟಿಂಗ್ ಕಾರ್ಯ ನಡೆಯುತ್ತಿದೆ. ಒರಿಯೋ ಚಿತ್ರಕ್ಕೆ ಕಥೆ, ಚಿತ್ರಕಥೆ. ಸಂಭಾಷಣೆಗಳನ್ನು ನಿರ್ದೇಶಕ ನಂದನ ಪ್ರಭು ಅವರೇ ಬರೆದಿದ್ದಾರೆ. ವಿಜಯಶ್ರೀ ಆರ್.ಎಂ. ಹಾಗೂ ವೈಶಾಲಿ ವೈ.ಜೆ. ಈ ಚಿತ್ರದ ನಿರ್ಮಾಪಕರು. ಬ್ಯಾಟಪ್ಪಗೌಡ, ಪ್ರಭಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಿತಿನ್‌ಗೌಡ ಹಾಗೂ ಶುಭಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

- Advertisement -

Latest Posts

Don't Miss