Political News: ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದ ಜಾತ್ರೆಯೊಂದರಲ್ಲಿ ತಮ್ಮ ಮಗಳು ಹಾಗೂ ಅವಳ ಸ್ನೇಹಿತೆಯ ಜೊತೆಗೆ ಗೂಂಡಾಗಳು ಅಸಭ್ಯವಾಗಿ ವರ್ತಿಸಿರುವುದನ್ನು ಖಂಡಿಸಿ ಕೇಂದ್ರ ಸಚಿವೆ ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಖುದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಚಿವೆ ರಕ್ಷಾ ಖಡ್ಸೆ ಅವರೇ ಮುಕ್ತೈ ನಗರ ಠಾಣೆಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ 7 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ, ಐಟಿ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಓರ್ವ ಆರೋಪಿ ಸೊಹಮ್ ಮಾಲಿಯನ್ನು ಪೊಲೀಸರು ಬಂಧಿಸಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೂ ಘಟನೆಯ ಕುರಿತು ಸ್ಥಳೀಯ ಮಹಾಯುತಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾನು ನ್ಯಾಯ ಕೇಳುವ ತಾಯಿಯಾಗಿ ಬಂದಿದ್ದೇನೆಯೇ ಹೊರತು, ಕೇಂದ್ರ ಮಂತ್ರಿ ಅಥವಾ ಸಂಸದಳಾಗಿ ಬಂದಿಲ್ಲ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಈ ರೀತಿ ನಡೆಯುತ್ತಿರುವ ಘಟನೆಗಳೇ ಹೇಳುತ್ತಿವೆ ಈ ರಾಜ್ಯದಲ್ಲಿ ಕಾನೂನು ಸುವ್ಸವಸ್ಥೆ ಹಾಳಾಗಿದೆ ಎನ್ನುವುದರ ಬಗ್ಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಒಬ್ಬ ಜನಪ್ರತಿನಿಧಿಯ ಮಗಳಿಗೆ ಹೀಗಾದರೆ ಇನ್ನೂ ಜನಸಾಮಾನ್ಯರ ಗತಿಯೇನು..? ಓರ್ವ ಸಂಸದೆ ಮತ್ತು ಕೇಂದ್ರ ಸಚಿವೆಯ ಪುತ್ರಿಗೆ ಈ ರೀತಿಯ ಸ್ಥಿತಿಯಾಗಿದ್ದು, ನಿಜಕ್ಕೂ ದುರದೃಷ್ಟಕರ. ಇನ್ನು ರಾಜ್ಯದ ನಮ್ಮ ಹೆಣ್ಣು ಮಕ್ಕಳ ಸ್ಥಿತಿ ಏನು..? ಎಂದು ಕಳವಳದಿಂದ ಫಡ್ನವೀಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ನಾನು ಗುಜರಾತ್ನಲ್ಲಿದ್ದೆ. ನನ್ನ ಮಗಳು ಕೋಥಾಲಿಯ ಸಂತ ಮುಕ್ತಾಯಿ ಜಾತ್ರೆಗೆ ಹೋಗಬೇಕು ಎಂದು ಫೋನ್ ಮಾಡಿದ್ದಳು. ನೀನುಗರಕ್ಷಕರರನ್ನು ಜೊತೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದೆ. ಆದರೂ ಸಹ ಆ ಜಾತ್ರೆಯಲ್ಲಿ 30 ರಿಂದ 40 ಗೂಂಡಾಗಳು ನನ್ನ ಮಗಳು ಮತ್ತು ಆಕೆಯ ಸ್ನೇಹಿತರನ್ನು ಹಿಂಬಾಲಿಸಿದ್ದರು. ಅಲ್ಲದೆ ಉದ್ದೇಶ ಪೂರ್ವಕವಾಗಿಯೇ ತಳ್ಳಾಡಿ ಅವರ, ಫೋಟೋ ವಿಡಿಯೋಗಳನ್ನು ತೆಗೆದುಕೊಂಡಿದ್ದರು. ಇದನ್ನು ತಡೆಯಲು ಬಂದ ನಮ್ಮ ಸಿಬ್ಬಂದಿ ಮೇಲೆಯೂ ಗೂಂಡಾಗಳು ದಾಳಿ ಮಾಡಿದ್ದರು. ಬಳಿಕ ಅಲ್ಲಿಂದ ಮನೆಗೆ ಹಿಂದಿರುಗಿದಾಗ ನನ್ನ ಮಗಳು ಈ ಘಟನೆಯನ್ನು ಅತ್ಯಂತ ನೋವಿನಿಂದ ನನಗೆ ಹೇಳಿದ್ದಾಳೆ. ಅಲ್ಲದೆ ಕಳೆದ ಫೆಬ್ರವರಿ 24ರಂದು ನನ್ನ ಕಾರ್ಯಕ್ರಮದಲ್ಲಿ ಅನುಚಿತವಾಗಿ ವರ್ತಿಸಿದ್ದ ಜನರೇ ಜಲಗಾಂವ್ನಲ್ಲಿಯೂ ಇದ್ದರು ಎಂದು ಅವಳು ನನಗೆ ಮಾಹಿತಿ ನೀಡಿದ್ದಾಳೆ ಎಂದು ಹೇಳುವ ಮೂಲಕ ಸಚಿವೆ ರಕ್ಷಾ ಖಡ್ಸೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಆರೋಪಿಗಳ ಹೆಡೆ ಮುರಿ ಕಟ್ಟುತ್ತೇವೆ ಎಂದ ಫಡ್ನವೀಸ್..
ಇನ್ನೂ ಇದೇ ವಿಚಾರಕ್ಕೆ ಮಹಾರಾಷ್ಟ್ರದಲ್ಲಿ ರಾಜಕೀಯ ನಾಯಕರ ಕೆಸರೆರಚಾಟ ಶುರುವಾಗಿದ್ದು ಒಬ್ಬ ಕೇಂದ್ರ ಸಚಿವರೇ ಹೇಳುತ್ತಾರಂದರೆ ನಿಜವಾಗಿಯೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಅಲ್ಲದೆ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್, ಘಟನೆಗೆ ಕಾರಣರಾದವರು ಒಂದು ಪಕ್ಷದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅದರೆ ಈ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅರೋಪಿಗಳು ಯಾರೇ ಆಗಲಿ, ಎಷ್ಟೇ ಪ್ರಭಾವಿಗಳೇ ಆಗಲಿ ಸುಮ್ಮನೇ ಬಿಡುವುದಿಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.