ಬೆಂಗಳೂರು : ಒಂದಾದ ಮೇಲೊಂದರಂತೆ ಭಯೋತ್ಪಾದಕ ಪಾಕಿಸ್ತಾನದಲ್ಲಿ ಉಗ್ರರ ಮಾರಣಹೋಮ ನಡೆಯುತ್ತಿದೆ. ಕಳೆದ ಮೇ7 ರಂದು ಭಾರತವು ಏರ್ಸ್ಟ್ರೈಕ್ ನಡೆಸಿ ಆಪರೇಷನ್ ಸಿಂಧೂರ್ ಮೂಲಕ ನೂರಾರು ಉಗ್ರರನ್ನು ಹೊಡೆದುರುಳಿಸಿತ್ತು. ಅಲ್ಲದೆ ಅವರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು. ಹೀಗೆ ಪಾಪಿಗಳ ಒಡಲಲ್ಲಿರುವ ಟೆರರಿಸ್ಟ್ಗಳಿಗೆ ಅಂತಿಮ ಕ್ಷಣಗಳನ್ನು ತೋರಿಸುವ ಕಾರ್ಯ ಮುಂದುವರೆದಿದೆ. ಆದರೆ ಬೆಂಗಳೂರು ಐಐಎಸ್ಸಿ ಸೇರಿದಂತೆ ಭಾರತದಲ್ಲಿ ಮೂರು ಭಯೋತ್ಪಾದಕ ದಾಳಿಗಳ ರೂವಾರಿಯಾಗಿದ್ದ ಲಷ್ಕರ್-ಎ- ತೊಯ್ಬಾದ ನಟೋರಿಯಸ್ ಟೆರರಿಸ್ಟ್ ಅಬು ಸೈಪುಲ್ಲಾ ಖಾಲೀದ್ ಮಾತ್ರ ಅಪರಿಚಿತರ ಗುಂಡೇಟಿಗೆ ರಕ್ತ ಚೆಲ್ಲಿದ್ದಾನೆ.
ನಾನಾ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ನಟೋರಿಯಸ್..
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ದಾಳಿಕೋರರು ಬಲಿ ಪಡೆದಿದ್ದಾರೆ. ಈತ ಭಾನುವಾರ ಸಿಂಧ್ನ ಬಾಡಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಆಗಿರುವ ಈತನ ಸಾವು ಈ ಪ್ರದೇಶದಲ್ಲಿ ಎಲ್ಇಟಿಯ ಕಾರ್ಯಾಚರಣೆಗಳಿಗೆ ಗಮನಾರ್ಹ ಹೊಡೆತ ಬಿದಂತಾಗಿದೆ. ಮೊಹಮ್ಮದ್ ಸಲೀಮ್, ವಿನೋದಕುಮಾರ, ಖಾಲೀದ್, ವನಿಯಾಲ್, ವಾಜಿದ್ ಮತ್ತು ಸಲೀಂ ಭಾಯ್ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಸೈಫುಲ್ಲಾ, ಎಲ್ಇಟಿಯ ಕಾರ್ಯಾಚರಣೆಗಳು, ನೇಮಕಾತಿ, ನಿಧಿಸಂಗ್ರಹಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದನು.
ಗ್ರೆನೇಡ್ ಎಸೆದು ಗುಂಡಿನ ದಾಳಿ ನಡೆಸಿದ್ದರು..
ಈತ ಭಾರತದಲ್ಲಿ ಹಲವಾರು ಉನ್ನತ ಮಟ್ಟದ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಹಾಗೂ ಮಾಸ್ಟರ್ಮೈಂಡ್ ಆಗಿದ್ದ. ಕಳೆದ 2001 ರಲ್ಲಿ ಉತ್ತರ ಪ್ರದೇಶದ ರಾಂಪುರದಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಆರ್ಪಿಎಫ್ ಶಿಬಿರದ ಮೇಲೆ ದಾಳಿಯಲ್ಲಿ ಭಾಗಿಯಾಗಿದ್ದ. ಇದರಲ್ಲಿ 7 ಯೋಧರು ಹಾಗೂ ಓರ್ವ ರಿಕ್ಷಾ ಚಾಲಕ ಮೃತಪಟ್ಟಿದ್ದರು. ಅಲ್ಲದೆ ಮೂವರು ಯೋಧರು ಸೇರಿದಂತೆ 8 ಮಂದಿ ಗಾಯಗೊಂಡಿದ್ದರು.
ಇನ್ನೂ 2005ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಐಐಎಸ್ಸಿ ಮೇಲಿನ ದಾಳಿಯಲ್ಲೂ ಮಾಸ್ಟರ್ ಮೈಂಡ್ ಆಗಿದ್ದ. ಐಐಎಸ್ಸಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನೇ ಗುರಿಯಾಗಿಸಿ ಖಾಲೀದ್ ತಂಡದ ಉಗ್ರರು ಗಣ್ಯರ ಮೇಲೆ ಗ್ರೆನೇಡ್ ಎಸೆದು ದಟ್ಟ ಹೊಗೆ ಬರುವಂತೆ ಮಾಡಿದ್ದರು. ಬಳಿಕ ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಆಗ ವಿಜ್ಞಾನಿ ಪ್ರೊಪೆಸರ್ ಮನೀಶ್ ಚಂದ್ರ ಪುರಿ ಮೃತಪಟ್ಟಿದ್ದರು. ಅಲ್ಲದೆ, ಗುಂಡೇಟಿನಿಂದ 8 ಮಂದಿ ಗಾಯಗೊಂಡಿದ್ದರು.
ಆರ್ಎಸ್ಎಸ್ ಕಚೇರಿ ಮೇಲೆ ದಾಳಿಯ ಸಂಚು..
ಇನ್ನೂ 2006ರಲ್ಲಿ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಎಸ್ಎಸ್ ಪ್ರಧಾನ ಕಚೇರಿಯ ಮೇಲಿನ ದಾಳಿಯನ್ನು ಈತನೇ ನಡೆಸಿದ್ದ. ಈ ದಾಳಿಗಾಗಿ ಮೂವರು ಉಗ್ರರಿಗೆ ಪೊಲೀಸರ ವೇಷ ತೊಡಿಸಿ ಕಚೇರಿಗೆ ಕಾರಿನಲ್ಲಿ ಕಳುಹಿಸಿದ್ದ. ಆದರೆ ಗುಪ್ತಚರ ಇಲಾಖೆಗೆ ದೊರೆತ ಸ್ಪಷ್ಟ ಮಾಹಿತಿಯಿಂದ ಈ ದಾಳಿಯನ್ನು ತಡೆಯಲಾಗಿತ್ತು. ಬಳಿಕ ಏಕಾಏಕಿ ನಡೆದ ಗುಂಡಿನ ದಾಳಿಯಲ್ಲಿ 3 ಉಗ್ರರನ್ನು ಹೊಡೆದುರುಳಿಸುವಲ್ಲಿ ಪೊಲೀಸರು ಸಫಲರಾಗಿದ್ದರು.
ನೇಪಾಳ ಮೂಲದ ಕಾರ್ಯಾಚರಣೆಗಳು..
ಸೈಫುಲ್ಲಾ ನೇಪಾಳದಲ್ಲಿ ಪ್ರಮುಖ ಎಲ್ಇಟಿ ಮಾಡ್ಯೂಲ್ ಅನ್ನು ನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ, ಇದು ಇಂಡೋ-ನೇಪಾಳ ಗಡಿಯ ಮೂಲಕ ಭಯೋತ್ಪಾದಕರು ಭಾರತಕ್ಕೆ ನುಸುಳಲು ಅನುಕೂಲ ಮಾಡಿಕೊಟ್ಟಿತ್ತು. ಲಷ್ಕರ್-ಎ- ತೊಯ್ಬಾ ಮತ್ತು ಅದರ ರಾಜಕೀಯ ಪಕ್ಷವಾದ ಜಮಾತ್-ಉದ್-ದವಾ ಜೆಯುಡಿ ಎರಡಕ್ಕೂ ಮೂಲಭೂತವಾದ ಹೇಳಿಕೊಡುವ ಕಾರ್ಯ ಸೇರಿದಂತೆ, ನಿಧಿಸಂಗ್ರಹಣೆಯಲ್ಲಿಯೂ ಈತ ಭಾಗಿಯಾಗಿದ್ದ. ಸೈಫುಲ್ಲಾ ನೇಪಾಳದ ನಾಗರಿಕಳಾದ ನಗ್ಮಾ ಬಾನು ಅವರನ್ನು ವಿವಾಹವಾಗಿದ್ದ. ಇದು ಈ ಪ್ರದೇಶದಲ್ಲಿ ಆತನ ಕಾರ್ಯಾಚರಣೆಯ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅನುಕೂಲವಾಗಿತ್ತು.
ಪಾಕ್ಗೆ ಪರಾರಿಯಾಗಿದ್ದ ಸೈಪುಲ್ಲಾ..
ಇನ್ನೂ ಮುಖ್ಯವಾಗಿ ಈ ಸೈಪುಲ್ಲಾ ಜೊತೆಯಾಗಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಶಬ್ಬಾಬುದ್ದೀನ್ ಮತ್ತು ಸೈಯದ್ ಅನ್ಸಾರಿ ಹಾಗೂ ಹಬೀಬ್ ಮಿಯಾನನ್ನು ಬಂಧಿಸಲಾಗಿತ್ತು. ಆದರೆ ಮಾಸ್ಟರ್ ಮೈಂಡ್ ಆಗಿದ್ದ ಸೈಪುಲ್ಲಾ ಮಾತ್ರ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ. ಆರಂಭದಲ್ಲಿ ಪಾಕಿಸ್ತಾನದ ಅಬು ಹಮ್ಮಾನೇ ರೂವಾರಿ ಎನ್ನಲಾಗುತ್ತಿತ್ತು. ಹೈದ್ರಾಬಾದ್ನ ಅಜೀಜ್ ಹಾಗೂ ಉತ್ತರ ಭಾರತ ಮೂಲದ ಮುಜಾಮೀಲ್ ಎಂಬಾತ ಕೂಡ ದಾಳಿಗೆ ಸಹಕರಿಸಿದ್ದ ಎಂಬುವುದು ತಿಳಿದು ಬಂದಿತ್ತು. ಆದರೆ ಇತ್ತೀಚಿನ ತನಿಖೆಯಲ್ಲಿ ಐಐಎಸ್ಸಿ ದಾಳಿಯ ಮಾಸ್ಟರ್ ಮೈಂಡ್ ಈ ಸೈಪುಲ್ಲಾ ಖಾಲೀದ್ ಎನ್ನುವುದು ಬೆಳಕಿಗೆ ಬಂದಿತ್ತು.