ಬೆಂಗಳೂರು: ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ರಾಜ್ಯ ಸರಕಾರ “ಕುಸುಮ್-ಸಿ ಯೋಜನೆ’ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಸಾಂಪ್ರದಾಯಿಕ ಮೂಲಗಳಿಂದ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ರೈತರ ಪಂಪ್ಸೆಟ್ಗಳಿಗೆ ಕನಿಷ್ಠ 7 ತಾಸು ವಿದ್ಯುತ್ ನೀಡಲು ಸರಕಾರಗಳು ನಿರಂತರ ಪ್ರಯತ್ನ ನಡೆಸಿದರೂ ಸಾಧ್ಯವಾಗುತ್ತಿಲ್ಲ.
ಹೀಗಾಗಿ ಸೌರ ಮೂಲದಿಂದ ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಒದಗಿಸಲು ಇಂಧನ ಇಲಾಖೆ ಕುಸುಮ್ ಯೋಜನೆ ಜಾರಿಗೆ ನಿರ್ಧರಿಸಿದೆ.
ಫೀಡರ್ ಮೂಲಕ ಸರಬರಾಜು
ಇಂಧನ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 5ರಿಂದ 10 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ಮೂಲಕ ಸೋಲಾರ್ ಘಟಕ ಇರುವ ಹಳ್ಳಿಗಳ ಸುತ್ತಮುತ್ತಲಿನ ರೈತರ ಪಂಪ್ಸೆಟ್ಗಳಿಗೆ ಸರಕಾರ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಿದೆ. ಮೊದಲ ಹಂತದಲ್ಲಿ ಸಮಾರು 2 ಲಕ್ಷ ರೈತರ ಪಂಪ್ಸೆಟ್ಗಳಿಗೆ ಅನುಕೂಲ ಕಲ್ಪಿಸಲು ಇಂಧನ ಇಲಾಖೆ ಯೋಜನೆ ರೂಪಿಸಿಕೊಂಡಿದೆ.
ಕೆಲವು ತಾಂತ್ರಿಕ ವಿಷಯಗಳ ಒಪ್ಪಿಗೆಗಾಗಿ ಕೇಂದ್ರ ಸರಕಾರಕ್ಕೆ ಯೋಜನೆಯ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅನುಮತಿ ದೊರೆತ ತತ್ಕ್ಷಣ ಯೋಜನೆ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದೆ.
ಗ್ರಾಹಕಸ್ನೇಹಿ ಯೋಜನೆ
ಇಂಧನ ಇಲಾಖೆ ಜನಸ್ನೇಹಿ ಯೋಜನೆ ಜಾರಿಗೆ ಮುಂದಾಗಿದ್ದು, ರಾಜ್ಯದ 187 ಕಡೆಗಳಲ್ಲಿ ಜನಸ್ನೇಹಿ ಕೇಂದ್ರ ತೆರೆಯಲು ನಿರ್ಧರಿಸಿದೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು, ದರ ಬದಲಾವಣೆ, ಹೆಸರು ಬದಲಾವಣೆ, ವಿದ್ಯುತ್ ಸಾಮರ್ಥ್ಯ ಹೆಚ್ಚಳ ಮಾಡಿ ಸಲು ಆನ್ಲೈನ್ ಮೂಲಕ ನಿರ್ದಿಷ್ಟ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿದರೆ ಗ್ರಾಹಕ ರಿಗೆ ತತ್ಕ್ಷಣ ಪರಿಹಾರ ಒದಗಿಸಲು ಪ್ರತೀ ಬೂತ್ನಲ್ಲಿ ಅಧಿಕಾರಿಯನ್ನು ನೇಮಿಸಲಾಗಿದೆ. ಇದರಿಂದ ಸುಮಾರು 10 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಇಲಾಖೆ ಅಂದಾಜಿಸಿದೆ.
ರೈತರ ಪಂಪ್ಸೆಟ್ಗಳಿಗೆ
ಸೋಲಾರ್ ವಿದ್ಯುತ್ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದ್ದು, ತಾಂತ್ರಿಕ ಒಪ್ಪಿಗೆಗೆ ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಗ್ರಾಮ ಮಟ್ಟದಲ್ಲಿ 5-10 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾ ದನೆ ಮಾಡಿ ನೇರವಾಗಿ ರೈತರಿಗೆ ನೀಡಲಾಗುವುದು.
– ವಿ. ಸುನಿಲ್ ಕುಮಾರ್,
ಇಂಧನ ಸಚಿವ