Sports News: ಭಾರತದ ಪುರುಷರು ಮತ್ತು ಮಹಿಳೆಯರ ಖೋಖೋ ವಿಶ್ವಕಪ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ, ಭಾರತವನ್ನು ಗೆಲ್ಲಿಸಿರುವ ಕರ್ನಾಟಕ ಮೂಲದ ಚೈತ್ರ ಮತ್ತು ಎಂ.ಕೆ.ಗೌತಮ್ ಅವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಪುರುಷರು ಮತ್ತು ಮಹಿಳೆಯರ ಖೋಖೋ ವಿಶ್ವಕಪ್ ತಂಡದಲ್ಲಿ ಅಮೋಘ ಆಟವನ್ನಾಡಿ ಭಾರತವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಮಲ್ಲೀಗೆರೆ ಗ್ರಾಮದ ಎಂ.ಕೆ.ಗೌತಮ್ ಹಾಗೂ ಟಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಚೈತ್ರಾ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ದೇಶೀಯ ಕ್ರೀಡೆ ಖೋಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಇವರ ಜತೆ ತಂಡಸ್ಫೂರ್ತಿಯಿಂದ ಆಟವಾಡಿದ ಎಲ್ಲಾ ಆಟಗಾರರಿಗೂ ಶುಭಾಶಯಗಳು ಎಂದು ಹೆಚ್ಡಿಕೆ ವಿಶ್ ಮಾಡಿದ್ದಾರೆ.
ಕನ್ನಡ ನೆಲದ ಗ್ರಾಮೀಣ ಮಕ್ಕಳಿಬ್ಬರೂ ಇಂದು ಭಾರತಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ಮಾತ್ರವಲ್ಲದೆ, ಕನ್ನಡಮ್ಮನ ಕೀರ್ತಿ ಕಿರೀಟಕ್ಕೆ ಮತ್ತಷ್ಟು ಗರಿಗಳನ್ನು ಪೇರಿಸಿ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಇಬ್ಬರಿಗೂ ಶುಭವಾಗಲಿ, ಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.