Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಹಿಂದೆ ಮೋದಿ ಸರ್ಕಾರವನ್ನು ಅಂಬಾನಿ, ಅದನಾ ಸರ್ಕಾರ ಎಂದು ವ್ಯಂಗ್ಯವಾಡಿದ್ದರು.
ಇದೀಗ ಸಿಎಂ ಡಿಕೆಶಿ ಮನೆಗೆ ಅದಾನಿ ಭೇಟಿ ನೀಡಿದ್ದರ ವಿಷಯವಾಗಿ, ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಾರ್ಕಳ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರವನ್ನು ಅದಾನಿ, ಅಂಬಾನಿ ಸರ್ಕಾರ ಎಂದು ಟೀಕಿಸುತ್ತಿದ್ದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರೇ ಕರ್ನಾಟಕದಲ್ಲಿ ಇರುವುದು ಯಾರ ಸರ್ಕಾರ ? ಕಾಂಗ್ರೆಸ್ ನದೋ, ಅದಾನಿಯದೋ, ಅಂಬಾನಿಯದೋ ?ಎಂದು ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಅದಾನಿಯನ್ನು ತನ್ನ ಆಜನ್ಮಶತ್ರು ಎಂದು ವಿದೇಶದ ನೆಲದಲ್ಲಿ ನಿಂತು ಅಬ್ಬರಿಸಿದ್ದ ರಾಹುಲ್ ಗಾಂಧಿ ದೇಶ ಇರುವುದು ಇಬ್ಬರಿಗೆ ಮಾತ್ರ ( ಅದಾನಿ, ಅಂಬಾನಿ) ಎಂದು ಆರೋಪಿಸಿದ್ದರು. ಆದರೆ ಇದೇ ಅದಾನಿ ಇಂದು ಕಾಂಗ್ರೆಸ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ನಿವಾಸಕ್ಕೆ ಬಂದು ಅಭಿನಂದಿಸಿ ತೆರಳಿದ್ದಾರೆ. ಹಾಗಾದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅದಾನಿಯದ್ದೋ ? ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ನಿಮ್ಮ ಮಾತಿಗೂ, ಕೃತಿಗೂ, ಸಿದ್ಧಾಂತ ಕ್ಕೂ ವಾಸ್ತವಕ್ಕೂ ಎಷ್ಟು ವೈರುಧ್ಯ ಎಂಬುದು ಇದರಿಂದಲೇ ಅರ್ಥವಾಗುತ್ತದೆ. ಹೇಳುವುದು ಒಂದು ಮಾಡುವುದು ಇನ್ನೊಂದು ! ರಾಹುಲ್ ಗಾಂಧಿ ಎಂದರೆ ವೈರುಧ್ಯಗಳ ಮೂಟೆ ಎಂದು ಸುನೀಲ್ ಕುಮಾರ್ ಟೀಕಿಸಿದ್ದಾರೆ.


