Health Tips: ಓರ್ವ ತಾಯಿಗೆ ಮಗು ಹುಟ್ಟಿದಾಗಿನಿಂದ ಹಿಡಿದು ಅದು ಮಾತನಾಡುವವರೆಗೂ ತಾಳ್ಮೆ ಇರಬೇಕು ಅಂತಾರೆ. ಯಾಕಂದ್ರೆ ಮಗು ಅಳೋದು, ಹಸಿವಾದಾಗ, ಬಟ್ಟೆ ಹಸಿಯಾದಾಗ ಅಥವಾ ಮಲವಿಸರ್ಜನೆ, ಮೂತ್ರ ವಿಸರ್ಜನೆ ಮಾಡಿಕೊಂಡಾಗ. ಹಾಗಾಗಿ ತಾಯಿಯಾದವಳು, ಮಗುವನ್ನು ಸರಿಯಾಗಿ ಪರೀಕ್ಷಿಸಿ, ಮಗು ಯಾಕೆ ಅಳುತ್ತಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.
ಆದರೆ ಚೆನ್ನಾಗಿ ಹಾಲು ಕುಡಿಸಿ, ಒಳ್ಳೆ ಬಟ್ಟೆ ಹಾಕಿ, ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗಿದ್ದರೂ ಕೂಡ, ಕೆಲ ಮಕ್ಕಳು ಮಧ್ಯರಾತ್ರಿ ಎದ್ದು ಅಳಲು ಶುರು ಮಾಡುತ್ತಾರೆ. ಹಾಲು ಕುಡಿಸಿದರೂ ಕುಡಿಯುವುದಿಲ್ಲ. ಮೇಲಿಂದ ನೋಡಲು ಅವರಿಗೆ ಯಾವುದೇ ತೊಂದರೆ ಇರುವುದಿಲ್ಲ. ಹಾಗಾದ್ರೆ ಮಕ್ಕಳು ರಾತ್ರಿ ವೇಳೆಯೇ ಏಕೆ ಜೋರಾಗಿ ಕೂಗುತ್ತಾರೆ ಎಂದು ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ.
ಹಿರಿಯರು ಹೇಳುವ ಹಾಗೆ ಮಗು ಪ್ರತೀ ರಾತ್ರಿ ಅಳುತ್ತಿದ್ದರೆ, ಅದನ್ನು ಬಾಲಗ್ರಹ ಸಮಸ್ಯೆ ಎನ್ನಲಾಗುತ್ತದೆ. ಬಾಲಗ್ರಹ ಸಮಸ್ಯೆ ಇದ್ದರೆ, ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಇರುತ್ತದೆ. ಮಾನಸಿಕ ಸಮಸ್ಯೆ ಎಂದರೆ, ಕೋಪ ಬರುವುದು, ಹಠ ಹೆಚ್ಚಾಗುವುದು, ಮಗು ಸುಮ್ಮ ಸುಮ್ಮನೆ ಅಳುವುದೆಲ್ಲ ಮಾಡುತ್ತದೆ. ಅದೇ ರೀತಿ ದೈಹಿಕ ಸಮಸ್ಯೆ ಎಂದರೆ, ಅದಕ್ಕೆ ಪದೇ ಪದೇ ಶೀತ, ಕೆಮ್ಮು, ಹೊಟ್ಟೆ ನೋವಿನ ಸಮಸ್ಯೆ ಬರುತ್ತದೆ.
ಇನ್ನೊಂದು ವಿಚಾರ ಎಂದರೆ, ಮಗುವಿಗೆ ಬಾಲಗ್ರಹ ಸಮಸ್ಯೆ ಇದ್ದಾಗ, ಮಗುವಿನ ಕಣ್ಣರೆಪ್ಪೆ ನೆಟ್ಟಗೆ ಇರುತ್ತದೆ. ಸಾಮಾನ್ಯವಾಗಿ ಕಣ್ಣಿನ ರೆಪ್ಪೆ ಬಗ್ಗಿದ ರೀತಿ ಇರುತ್ತದೆ. ಆದರೆ ಬಾಲಗ್ರಹ ಸಮಸ್ಯೆ ಇದ್ದಾಗ, ಕಣ್ಣರೆಪ್ಪೆ ನೆಟ್ಟಗೆ ಇರುತ್ತದೆ.
ತಾಯಿಯಾಗ ಬಯಸುವವರು, ಗರ್ಭಿಣಿಯಾದವರು ಆರೋಗ್ಯಕರ ಆಹಾರ ಸೇವನೆ ಮಾಡಿದರೆ, ಚಿಕಿತ್ಸೆ ಸರಿಯಾದ ಕ್ರಮದಲ್ಲಿ ತೆಗೆದುಕೊಂಡರೆ, ಗರ್ಭಾವಸ್ಥೆಯಲ್ಲಿ ದೇವರ ನಾಮಸ್ಮರಣೆ ಮಾಡಿದರೆ, ಒಳ್ಳೆಯ ಮಾತುಗಳನ್ನಾಡಿದರೆ, ಕೇಳಿದರೆ ಮಗುವಿಗೆ ಇಂಥ ಸಮಸ್ಯೆ ಬರುವುದಿಲ್ಲ.
ಇನ್ನು ಬಾಣಂತನ ಸರಿಯಾದ ರೀತಿ ಇದ್ದ, ಬಾಣಂತನದ ಸಮಯದಲ್ಲಿ ತಾಯಿಯ ಮನಸ್ಸು ಶಾಂತವಾಗಿದ್ದು, ಆಕೆಗೆ ಕಿರಿ ಕಿರಿಯಾಗದ ರೀತಿ ಇದ್ದರೆ, ಇಂಥ ಸಮಸ್ಯೆ ಉದ್ಭವಿಸುವುದಿಲ್ಲ. ಏಕೆಂದರೆ, ಬಾಣಂತನದ ಸಮಯದಲ್ಲಿ ತಾಯಿ ಮಗು ಇಬ್ಬರ ಮಾನಸಿಕ ನೆಮ್ಮದಿ ಮತ್ತು ದೈಹಿಕ ನೆಮ್ಮದಿ ಎರಡೂ ಮುಖ್ಯವಾಗಿರುತ್ತದೆ. ಹಾಗಾಗಿ ತಾಯಿಗೆ ಕಿರಿಕಿರಿಯಾಗುವ, ಮನಸ್ಸಿಗೆ ಬೇಸರವಾಗುವ ರೀತಿ ಎಂದಿಗೂ ನಡೆದುಕೊಳ್ಳಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.