ಹಿಂದಿನ ಕಾಲದಲ್ಲಿ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಆಗೆಲ್ಲಾ ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ ಇವೆಲ್ಲ ಇರಲಿಲ್ಲ. ಆದರೂ ಜನ ಪ್ರೀತಿಯಿಂದ ಇದ್ದರು, ಸಂಬಂಧಕ್ಕೆ ಬೆಲೆ ಕೊಡುತ್ತಿದ್ದರು. ಕಷ್ಟಪಟ್ಟು ದುಡಿದು ತಿನ್ನುತ್ತಿದ್ದರು. ಆದ್ರೆ ಮೊಬೈಲ್ ಬಂದಿದ್ದೇ ಬಂದಿದ್ದು, ಸಂಬಂಧಕ್ಕೆ ಬೆಲೆ ಕೊಡುವವರು ಕಡಿಮೆಯಾಗುತ್ತಿದ್ದಾರೆ. ನಾಲ್ಕು ರೀಲ್ಸ್ ಮಾಡಿ ಫೇಮಸ್ ಆದ್ರೆ, ಲಕ್ಷ ಲಕ್ಷ ದುಡಿಮೆ. ಅದೇ ರೀತಿ ಮಾನಸಿಕ ನೆಮ್ಮದಿಯೂ ಕಡಿಮೆ. ಅದಕ್ಕಾಗಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯೂ ಮಾಡಬೇಕಾಗುತ್ತದೆ. ಅದಕ್ಕಾಗಿ ನಾವಿಂದು ಮಾನಸಿಕವಾಗಿ ಆರೋಗ್ಯವಾಗಿರಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಾವು ಮಾನಸಿಕವಾಗಿ ನೆಮ್ಮದಿಯಾಗಿದ್ದರಷ್ಟೇ, ನಾವು ಸುಖವಾಗಿರಲು ಸಾಧ್ಯ. ನಿಮ್ಮ ಬಳಿ ದೊಡ್ಡ ಬಂಗಲೆ, ಚೆಂದದ ಜೀವನ ಸಂಗಾತ, ಆರೋಗ್ಯವಂತ ಮಕ್ಕಳು, ರಾಶಿ ರಾಶಿ ಹಣವಿದ್ದರೂ ಕೂಡ, ನೀವು ಮಾನಸಿಕವಾಗಿ ನೆಮ್ಮದಿಯಾಗಿ ಇಲ್ಲವೆಂದಲ್ಲಿ, ಆ ಎಲ್ಲ ಸಂಪತ್ತು, ಸಂಬಂಧ ಕ್ಷುಲ್ಲಕವೆನ್ನಿಸಲು ಶುರುವಾಗುತ್ತದೆ. ಹಾಗಾಗಿ ಮನುಷ್ಯ ಮಾನಸಿಕವಾಗಿ ನೆಮ್ಮದಿಯಾಗಿರುವುದು ತುಂಬಾ ಮುಖ್ಯ.
ಮಾನಸಿಕವಾಗಿ ನೀವು ನೆಮ್ಮದಿಯಾಗಿರಲು ಮಾಡಬೇಕಾದ ಮೊದಲ ಕೆಲಸವೆಂದರೆ, ಹೊಸ ಹೊಸ ಕೆಲಸ, ಭಾಷೆ, ಆಟ ಹೀಗೆ ಏನನ್ನಾದರೂ ಹೊಸತಾಗಿ ಕಲಿಯಲು ಶುರು ಮಾಡಿ. ಆಗ ನಿಮ್ಮ ಮೆದುಳಿಗೆ ಕೆಲಸ ಸಿಗುತ್ತದೆ. ಹೊಸತೇನಾದರೂ ಕಲಿಯಲು ಶುರು ಮಾಡಿದಾಗ, ನಿಮಗೆ ಅಲ್ಲೇ ಗಮನವಿರುತ್ತದೆ. ಏಕಾಗೃತೆ ಇರುತ್ತದೆ. ಆಗ ಆ ಕೆಲಸ ಮಾಡುವುದರಲ್ಲಿ ಗಮನ ಕೊಡುತ್ತೀರಿ. ಆಗಲೇ ನೀವು ಮಾನಸಿಕವಾಗಿ ನೆಮ್ಮದಿಯಾಗಿರಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ, ಏನೇನೋ ಯೋಚನೆಗಳು ಬಂದು ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ಎರಡನೇಯ ಕೆಲಸ ಜೀವನ ಬಂದ ಹಾಗೆ ಸ್ವೀಕರಿಸಿ. ನೀವು ಯಾವುದೇ ಕೆಲಸ ಮಾಡಲು ಹೋದಾಗ ಅದರಲ್ಲಿ ವಿಫಲರಾದರೆ, ಆ ವಿಫಲತೆಯನ್ನೂ ಸಂಭ್ರಮಿಸುವುದನ್ನು ಕಲಿಯಿರಿ. ಕೆಲವೊಮ್ಮೆ ವಿಫಲತೆಯೂ ಹಲವಾರು ಪಾಠ ಕಲಿಸುತ್ತದೆ. ಆ ಪಾಠದಿಂದಲೇ ನಾವು ಮುಂದೆ ಸಫಲರಾಗಬೇಕು. ಉದಾಹರಣೆಗೆ ನೀವು ಉದ್ಯಮ ಶುರು ಮಾಡಿರುತ್ತೀರಿ. ಅದರಲ್ಲಿ ನೀವು ವಿಫಲರಾದರೆ, ಯಾಕೆ ವಿಫಲನಾದೆ..? ಅದಕ್ಕೆ ಕಾರಣವೇನು..? ಮತ್ತೆ ನಾನು ಹೇಗೆ ಸಫಲನಾಗಬೇಕು ಎಂಬ ಬಗ್ಗೆ ಯೋಚನೆ ಮಾಡಿ. ಅದನ್ನ ಬಿಟ್ಟು, ಅಯ್ಯೋ ನಾನು ವಿಫಲನಾದೆ ಎಂದು ಚಿಂತೆ ಮಾಡಬೇಡಿ. ಯಾಕಂದ್ರೆ ಚಿಂತೆಯೇ ಚಿತೆ ಏರಲು ಕಾರಣವಂತೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..