Spiritual: ಈ ಲೋಕ ಸೃಷ್ಟಿಗೆ ಕಾರಣರಾದವರು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಎಲ್ಲರಿಗೂ ಗೊತ್ತು. ಪೌರಾಣಿಕ ಪುಸ್ತಕಗಳಲ್ಲಿ ಇವರ ಬಗ್ಗೆ ಹಲವಾರು ಕಥೆಗಳಿದೆ. ಅದರಲ್ಲಿ ಶ್ರೀವಿಷ್ಣು, ಪಾರ್ವತಿಯ ಅಣ್ಣನಾದ ಕಥೆಯೂ ಒಂದು. ಈ ಕಥೆಯನ್ನ ತಿಳಿಯೋಣ ಬನ್ನಿ..
ಸತಿ ದೇವಿ ಅಗ್ನಿಕುಂಡಕ್ಕೆ ಹಾರಿ ತನ್ನ ಪ್ರಾಣತ್ಯಾಗ ಮಾಡಿ, ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ. ಆಕೆಗೆ ಬುದ್ಧಿಬಂದ ಬಳಿಕ, ತಾನು ಶಿವನಿಗಾಗಿ ಜನಿಸಿದ್ದು ಎಂದು ಆಕೆಗೆ ನೆನಪು ಬರುತ್ತದೆ. ಆಗ ಆಕೆ ನಾರದರನ್ನು ನೆನೆಯುತ್ತಾಳೆ. ಪ್ರತ್ಯಕ್ಷರಾದ ನಾರದರು, ತಮ್ಮ ನೆನಪು ಮಾಡಿಕೊಳ್ಳಲು ಕಾರಣವೇನು ಎಂದು ಕೇಳುತ್ತಾರೆ. ಅದಕ್ಕೆ ಪಾರ್ವತಿ, ತಾನು ಶಿವನ ಪೂಜೆ ಮಾಡಿ, ಅವರನ್ನು ಪಡೆಯಬೇಕು. ಹಾಗಾಗಿ ನನಗೆ ಶಿವಲಿಂಗ ಬೇಕು. ಅದು ಎಲ್ಲಿ ಸಿಗುತ್ತದೆ ಎಂದು ಕೇಳುತ್ತಾಳೆ.
ಅದಕ್ಕೆ ನಾರದರು, ಅದು ಎಲ್ಲಿಯೂ ಸಿಗುವುದಿಲ್ಲ. ನೀನು ಮಣ್ಣಿನಿಂದ ಶಿವಲಿಂಗವನ್ನು ತಯಾರಿಸಿ, ಅದಕ್ಕೆ ಪೂಜೆ ಮಾಡಬೇಕು ಎಂದು ಹೇಳಿ ಅಪ್ರತ್ಯಕ್ಷರಾಗುತ್ತಾರೆ. ಪಾರ್ವತಿ ಕಷ್ಟಪಟ್ಟು, ಮಣ್ಣಿನಿಂದ ಲಿಂಗ ತಯಾರಿಸಲು ಪ್ರಯತ್ನಿಸಿದರೂ ಆಕೆ ವಿಫಲಳಾಗುತ್ತಾಳೆ. ಇದನ್ನು ಕಂಡ ಶ್ರೀವಿಷ್ಣು ಬ್ರಾಹ್ಮಣನ ವೇಷ ಧರಿಸಿ, ಆಕೆಯ ಸಹಾಯಕ್ಕೆ ಹೋಗುತ್ತಾನೆ.
ಆಗ ಪಾರ್ವತಿ, ಅಣ್ಣ ನನಗೆ ಲಿಂಗ ತಯಾರಿಸಲು ಸಹಾಯ ಮಾಡುವಿರಾ ಎಂದು ಕೇಳುತ್ತಾಳೆ. ಆಕೆ ಅಣ್ಣ ಅಂದಾಗ, ಶ್ರೀವಿಷ್ಣುವಿಗೆ ಆನಂದ ಬಾಷ್ಪ ಬರುತ್ತದೆ. ಆ ಕಣ್ಣೀರಿನಿಂದಲೇ, ಶಿವಲಿಂಗ ತಯಾರಾಗುತ್ತದೆ. ಆ ಲಿಂಗಕ್ಕೆ ಪೂಜೆ ಮಾಡಿದ ಪಾರ್ವತಿ, ಶಿವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಪಾರ್ವತಿಯ ತಪಸ್ಸಿಗೆ ಮೆಚ್ಚಿದ ಶಿವ, ಆಕೆಯನ್ನು ವಿವಾಹವಾಗುತ್ತಾನೆ. ಆ ವಿವಾಹದಲ್ಲಿ ಪಾರ್ವತಿಯ ಅಣ್ಣನಾಗಿ ಶ್ರೀವಿಷ್ಣು ತನ್ನ ಕರ್ತವ್ಯ ನಿಭಾಯಿಸುತ್ತಾನೆ. ಈ ದಿನವನ್ನೇ ಹಿಂದೂಗಳು ಶಿವರಾತ್ರಿ ಎಂದು ಆಚರಿಸುತ್ತಾರೆ.
ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..