Political News: ಹೈದರಾಬಾದ್: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ (CM) ಅಧಿಕಾರ ವಹಿಸಿಕೊಂಡಿರುವ ರೇವಂತ್ ರೆಡ್ಡಿ , ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಚಾರದ ವೇಳೆ ನೀಡಿದ್ದ ಪ್ರಮುಖ ಭರವಸೆಯೊಂದನ್ನು ಈಡೇರಿಸಿದ್ದಾರೆ.
ರೇವಂತ್ ರೆಡ್ಡಿ ಅವರು ತಮ್ಮ ಅಧಿಕೃತ ನಿವಾಸದ ಮುಂಭಾಗವಿರುವ ಕಬ್ಬಿಣದ ಬ್ಯಾರಿಕೇಡ್ ಅನ್ನು ತೆಗೆಸಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿಯುವುದಕ್ಕೂ ಮೊದಲೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಹೈದರಾಬಾದ್ನ ಪ್ರಗತಿ ಭವನದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಹಲವಾರು ಬುಲ್ಡೋಜರ್ಗಳು, ಟ್ರ್ಯಾಕ್ಟರ್ಗಳು ಹಾಗೂ ಕಟ್ಟಡ ಕಾರ್ಮಿಕರು ಈ ಕಬ್ಬಿಣದ ಬ್ಯಾರಿಕೇಡ್ಗಳನ್ನು ಕಿತ್ತು ಹಾಕುವುದು ಕಂಡುಬಂದಿದೆ.
ಈ ಬ್ಯಾರಿಕೇಡ್ ಹಿಂದೆ ಪಾದಚಾರಿಗಳ ಪ್ರವೇಶವನ್ನು ನಿರ್ಬಂಧಿಸುತ್ತಿತ್ತು. ಹಲವು ವರ್ಷಗಳಿಂದ ಈ ಬ್ಯಾರಿಕೇಡ್ನಿಂದಾಗಿ ಚಲಿಸುವ ವಾಹನಗಳ ದಟ್ಟಣೆಯೂ ಉಂಟಾಗುತ್ತಿತ್ತು. ಈ ಹಿನ್ನೆಲೆ ರೇವಂತ್ ರೆಡ್ಡಿ ತಮ್ಮ ಚುನಾವಣಾ ಪ್ರಚಾರದ ವೇಳೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಬ್ಯಾರಿಕೇಡ್ ಅನ್ನು ತೆಗೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಪ್ರಮಾಣವಚನ ಸ್ವೀಕರಿಸುತ್ತಲೇ ಅವರು ತಮ್ಮ ಮೊದಲ ಭರವಸೆಯನ್ನು ಪೂರೈಸಿದ್ದಾರೆ.
ಕಳೆದ ತಿಂಗಳು ನಡೆದ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಂದು ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ. ರೇವಂತ್ ರೆಡ್ಡಿ ಸಿಎಂ ಆಗಿ, ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ದೇಶದ ತೆರಿಗೆಗಳ್ಳರ ಮೇಲೆ ಐಟಿ ದಾಳಿ: ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್ಗೆ ಸುಸ್ತು!