International News: ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಮುಂದಿಟ್ಟು ಜಾಗತಿಕ ಮಟ್ಟದಲ್ಲಿ ಭಾರತದ ವಿರುದ್ಧ ಅಪಪ್ರಚಾರಕ್ಕೆ ಯತ್ನಿಸಿದ ಪಾಕಿಸ್ತಾನ ಖುದ್ದು ಬೆತ್ತಲಾಗಿದೆ. ಕೇಂದ್ರ ಸರ್ಕಾರ ಹೇಳಿರುವಂತೆ 20 ಕಡೆಗಳಲ್ಲಿ ದಾಳಿ ನಡೆದಿಲ್ಲ. 28 ಸ್ಥಳಗಳ ಮೇಲೆ ಪ್ರಹಾರ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
28 ಸ್ಥಳಗಳಲ್ಲಿ ಭಾರತ ದಾಳಿ ನಡೆಸಿರುವ ಬಗ್ಗೆ ರಣಹೇಡಿಯಿಂದ ಮಾಹಿತಿ..
ಭಾರತದ ದಾಳಿಯ ಬಗ್ಗೆ ಆಪರೇಷನ್ ಬನಿಯಾನ್ ಅನ್ ಮರ್ಸೂಸ್ ಹೆಸರಿನಲ್ಲಿ ದಾಖಲೆ ಬಿಡುಗಡೆ ಮಾಡಿರುವ ಪಾಕಿಸ್ತಾನ ಗಡಿಯಿಂದ ಒಂದು ಸಾವಿರ ಕಿಲೋ ಮೀಟರ್ ದೂರ ಪ್ರದೇಶಗಳು ಸೇರಿದಂತೆ ನಮ್ಮ ನೆಲದ 28 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಸಂಗತಿಯನ್ನು ಬಹಿರಂಗ ಪಡಿಸಿದೆ. ದಾಳಿಗೆ ಒಳಗಾದ 11 ವಾಯು ನೆಲೆಗಳ ಪೈಕಿ 4 ವಾಯು ನೆಲೆಗಳ ಹೆಸರನ್ನು ಮಾತ್ರ ಉಲ್ಲೇಖಿಸಿರುವುದು ಅಚ್ಚರಿ ಮೂಡಿಸಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ 20 ಕಡೆ ದಾಳಿ ನಡೆಸಿರುವುದಾಗಿ ಭಾರತೀಯ ರಕ್ಷಣಾ ಪಡೆಗಳು ಮಾಹಿತಿ ನೀಡಿದ್ದವು.
ಭಾರತದ ಮಾಹಿತಿಗಿಂತ ದೊಡ್ಡ ಪ್ರಮಾಣದ ಹಾನಿಯಾಗಿರುವುದು ದೃಢ..!
ಇನ್ನೂ ಪಾಕಿಸ್ತಾನ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಪೇಶಾವರ್, ಜಾಂಗ್, ಹೈದ್ರಾಬಾದ್, ಗುಜ್ರಾತ್, ಗುಜ್ರಾನ್ ವಾಲಾ, ಬಹಾವಲ್ನಗರ , ಅಟ್ಟಾಕ್, ಚೋರ್ಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಅಲ್ಲದೆ ಗಡಿಯಿಂದ 1000 ಕಿಲೋ ಮೀಟರ್, 700 ಕಿಲೋ ಮೀಟರ್ ದೂರದ ಪ್ರದೇಶಗಳ ಮೇಲೂ ಪ್ರಹಾರ ನಡೆಸಲಾಗಿದೆ. ದಾಖಲೆಗಳ ಪ್ರಕಾರ ಭಾರತ ನೀಡಿದ ಮಾಹಿತಿಗಿಂತ ದೊಡ್ಡ ಪ್ರಮಾಣದ ಹಾನಿಯಾಗಿರುವುದು ದೃಢಪಟ್ಟಿದೆ.
ದಾಖಲೆಗಳನ್ನು ಬಿಡುಗಡೆ ಮಾಡಿದ ಪಾಕಿಸ್ತಾನ..
ನಮ್ಮ ನೆಲದ ಮೇಲೆ ಭಾರತದ ಆಕ್ರಮಣ ನಡೆಸಿದೆ. ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂಬುದಾಗಿ ಜಗತ್ತಿನ ಮುಂದೆ ಬಿಂಬಿಸಲು ಪಾಕಿಸ್ತಾನ ದಾಖಲೆಗಳನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ಆದರೆ, ಭಾರತದಿಂದ ದಾಳಿಗೆ ತುತ್ತಾದ ಪ್ರದೇಶಗಳಲ್ಲಿ ನಾಗರಿಕ ಪ್ರದೇಶಗಳು ಯಾವವು ಎಂಬುದನ್ನು ಖಚಿತಪಡಿಸಿಲ್ಲ. ನಷ್ಟವಾದ ಪ್ರಮಾಣದ ಬಗ್ಗೆಯೂ ಉಲ್ಲೇಖ ಮಾಡಿಲ್ಲದಿರುವುದು ಗಮನಾರ್ಹ ಸಂಗತಿಯಾಗಿದೆ.
ಭಾರತದ ಪರಾಕ್ರಮವನ್ನು ಒಪ್ಪಿಕೊಂಡ ಪಾಕ್..
ಕಳೆದ ಮೇ 7 ರಿಂದ 10ರ ವರೆಗೆ ನಡೆದ 4 ದಿನದ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರ 9 ನೆಲೆಗಳು, ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತೀಯ ರಕ್ಷಣಾ ಪಡೆಗಳು ಮಾಹಿತಿ ನೀಡಿದ್ದವು. ಆದರೆ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿಯೇ ಪಾಕಿಸ್ತಾನ ಭಾರತದಿಂದ ದಾಳಿಗೆ ಒಳಗಾಗಿರುವುದನ್ನು ಸ್ವತಃ ಉಗ್ರ ಪೋಷಕ ರಾಷ್ಟ್ರವೇ ಒಪ್ಪಿಕೊಂಡಿದೆ. ಈ ಮೂಲಕ ಖುದ್ದಾಗಿಯೇ ಪರೋಕ್ಷವಾಗಿ ಪಾಕಿಸ್ತಾನ ಭಾರತದ ಪರಾಕ್ರಮವನ್ನು ಮೆಚ್ಚಿಕೊಂಡಂತಾಗಿದೆ.