ಸನಾತನ ಧರ್ಮದಲ್ಲಿ ಹಲವು ಪದ್ಧತಿಗಳಿದೆ, ಹಲವು ನಂಬಿಕೆಗಳಿದೆ. ಇಂಥ ನಂಬಿಕೆಗಳಲ್ಲಿ ನಾವು ಮಾಡುವ ಪಾಪ-ಪುಣ್ಯಗಳ ಆಧಾರದ ಮೇಲೆ ನಮ್ಮ ಬದುಕು ಅವಲಂಬಿತವಾಗಿದೆ ಅನ್ನೋದು ಕೂಡಾ ಒಂದು. ಅದೇ ರೀತಿ ಪೂರ್ವ ಜನ್ಮದ ಪಾಪ- ಪುಣ್ಯದಿಂದಲೇ ಮುಂದಿನ ಜನ್ಮ ನಿರ್ಧಾರವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕೂ ಪೂರ್ವ ಜನ್ಮಕ್ಕೂ ನಂಟಿದೆಯಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, ಇಂದು ನಾವು ಮಾಹಿತಿ ತಿಳಿಯೋಣ ಬನ್ನಿ..
ನಾವು ಪೂರ್ವ ಜನ್ಮದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ರೆ, ನಮಗೆ ಉತ್ತಮ ಸಂತಾನ ಹುಟ್ಟುತ್ತದೆ. ಮತ್ತು ನಾವು ಪೂರ್ವ ಜನ್ಮದಲ್ಲಿ ಕೆಟ್ಟ ಕಾರ್ಯಗಳನ್ನು ಮಾಡಿದ್ರೆ, ನಮಗೆ ಕೆಟ್ಟ ಗುಣವಿರುವ ಮಕ್ಕಳು ಜನಿಸುತ್ತಾರೆಂದು ಹೇಳಲಾಗಿದೆ. ಹಾಗಾಗಿಯೇ ನಾವು ಯಾವಾಗಲೂ ಒಳ್ಳೆಯ ಕಾರ್ಯಗಳನ್ನೇ ಮಾಡಬೇಕು. ಒಳ್ಳೆಯದನ್ನೇ ಬಯಸಬೇಕು ಅಂತಾ ಹೇಳೋದು.
ಹಿಂದೂ ಧರ್ಮಗ್ರಂಥಗಳ ಪ್ರಕಾರ, ನಾವು ಯಾವ ಜೀವಿಗೂ ಹಿಂಸೆ ಮಾಡದೇ, ಸಾಕಿದ ಪ್ರಾಣಿಗಳಿಗೆ ಹೊತ್ತೊತ್ತಿಗೆ ಊಟ ಕೊಟ್ಟರೆ, ನಮಗೆ ಮುಂದಿನ ಜನ್ಮದಲ್ಲಿ ಉತ್ತಮ ಸಂತಾನ ಹುಟ್ಟುತ್ತದೆ. ಅದು ಮುಪ್ಪಿನಲ್ಲಿ ನಮ್ಮ ಸೇವೆ ಮಾಡುತ್ತದೆ ಅಂತಾ ನಂಬಲಾಗಿದೆ. ಅದೇ ನಾವು ಸಾಕು ಪ್ರಾಣಿಗಳಿಗೆ ಸರಿಯಾಗಿ ಊಟ ಕೊಡದೇ, ಅದು ಅನಾರೋಗ್ಯದಿಂದ ಬಳಲುತ್ತಿದ್ದಾಗ, ಅದರ ಬಗ್ಗೆ ಅಸಡ್ಡೆ ಮಾಡಿದರೆ, ಮುಂದಿನ ಜನ್ಮದಲ್ಲಿ ನಮಗೆ ಋಣಪುತ್ರರು ಜನಿಸುತ್ತಾರೆ.
ಇಂಥ ಮಕ್ಕಳ ಜನ್ಮದಿಂದ ನಿಮಗೆ ನೆಮ್ಮದಿ ಇರುವುದಿಲ್ಲ. ಮುಪ್ಪಿನಲ್ಲಿ ಇವರು ನಿಮ್ಮನ್ನು ಸಾಕಿದರೂ, ಹೆಚ್ಚಾಗಿ ಇವರು ನಿಮ್ಮ ಮೇಲೆಯೇ ಅವಲಂಬಿತರಾಗಿರುತ್ತಾರೆ. ಕೆಲ ನಂಬಿಕೆಗಳ ಪ್ರಕಾರ, ಸಾಕಿದ ದನವನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳದೇ, ಕಳಪೆ ಆಹಾರ, ಎಂಜಿಲನ್ನು ಕೊಟ್ಟು, ಹೊಡೆದು ಬಡಿದು, ಹಾಲು ಕರಿಯುವಾಗಷ್ಟೇ ಕಾಳಜಿ ಮಾಡಿದಾಗ, ಇಂಥ ಋಣ ಪುತ್ರರು ಜನಿಸುತ್ತಾರೆಂದು ಹೇಳಲಾಗುತ್ತದೆ. ಹಾಗಾಗಿಯೇ ಸಾಕು ಪ್ರಾಣಿಗಳನ್ನೂ ಕಾಳಜಿಯಿಂದಲೇ ಕಾಣಬೇಕು.