Spiritual: ಭಾರತದಲ್ಲಿರುವ ಹಲವು ದೇವಸ್ಥಾನಗಳು ಚಮತ್ಕಾರಿ ದೇವಸ್ಥಾನಗಳಾಗಿದೆ. ಯಾಕಂದ್ರೆ ಅಂಥ ದೇವಸ್ಥಾನಗಳಲ್ಲಿ ಹರಕೆ ಕಟ್ಟಿದ್ರೆ, ಆ ಕೆಲಸ ಶೀಘ್ರದಲ್ಲೇ ನೆರವೇರುತ್ತದೆ. ಅಂಥ ದೇವಸ್ಥಾನಗಳಲ್ಲಿ ಬೆಂಗಳೂರಿನಲ್ಲಿರುವ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕೂಡ ಒಂದು. ಇಂದು ನಾವು ಈ ದೇವಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬೆಂಗಳೂರಿನ ಗಿರಿನಗರದಲ್ಲಿ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಮತ್ತು ಹರಕೆ ಹೊತ್ತು, ಕಾಯಿ ಕಟ್ಟುತ್ತಾರೆ. ಇಲ್ಲಿ ರಸೀದಿ ತೆಗೆದುಕೊಂಡರೆ, ಅವರೇ ಕಾಯಿ ಕೊಡುತ್ತಾರೆ. ಆ ಕಾಯಿಗೆ ನಂಬರ್ ಇರುತ್ತದೆ. ಅದನ್ನು ದೇವಸ್ಥಾನದಲ್ಲೇ ಕಟ್ಟಿ, ನಂಬರ್ ನೆನಪಿಟ್ಟುಕೊಳ್ಳಬೇಕು. ಇಂತಿಷ್ಟು ದಿನಗಳಲ್ಲಿ ನಾಲ್ಕು ದಿನ ಬಂದು, ಪ್ರದಕ್ಷಿಣೆ ಹಾಕಬೇಕು. ಕೊನೆಯ ದಿನ ಆ ಕಾಯಿಯನ್ನು ಪೂಜೆ ಮಾಡಿಸಿ, ತೆಗೆದುಕೊಂಡು ಹೋಗಿ, ಮನೆಯಲ್ಲಿ ಸಿಹಿ ತಿಂಡಿ ಮಾಡಿ, ನೀವು ತಿಂದು, ಇತರರಿಗೂ ಪ್ರಸಾದ ಹಂಚಬೇಕು. ಇದರಿಂದ ನೀವಂದುಕೊಂಡ ಕೆಲಸ ನೆರವೇರುತ್ತದೆ ಅನ್ನೋ ನಂಬಿಕೆ ಇದೆ.
ಬರೀ ಕಾಯಿ ಕಟ್ಟಿದರೆ ಸಾಲುವುದಿಲ್ಲ. ಬದಲಾಗಿ, ಇಲ್ಲಿ ಒಂದು ಮಂತ್ರವನ್ನು ಹೇಳಿಕೊಡಲಾಗುತ್ತದೆ. ಪ್ರತಿದಿನ ಅಲ್ಲಿನ ಪುರೋಹಿತರು ಹೇಳಿದಷ್ಟು ಬಾರಿ, ಈ ಮಂತ್ರವನ್ನು ಶ್ರದ್ಧಾ ಭಕ್ತಿಯಿಂದ ಪಠಿಸಬೇಕು. ಆ ಮಂತ್ರ ಹೀಗಿದೆ.
ತ್ವಮಸ್ಮಿನ್ ಕಾರ್ಯನಿರ್ಯೋಗೇ ಪ್ರಮಾಣಂ ಹರಿಸತ್ತಮ
ಹನುಮಾನ್ ಯತ್ನಮಾಸ್ಥಾಯ ದುಃಖ ಕ್ಷಯ ಕರೋ ಭವ
ಈ ಮಂತ್ರವನ್ನು ಪ್ರತಿದಿನ ಪಠಿಸಬೇಕು. ಇಷ್ಟೇ ಅಲ್ಲದೇ, ಜನ ಹನುಮನಿಗೆ ಎಲೆಯ ಹಾರ, ವಡೆಯ ಹಾರ, ಬೆಣ್ಣೆ ಅಲಂಕಾರ ಸೇರಿ, ಹಲವು ಸೇವೆ ಮಾಡಿಸುತ್ತಾರೆ. ಇದರಿಂದಲೂ, ಅವರಂದುಕೊಂಡ ಮನೋಕಾಮನೆ ಪೂರ್ಣಗೊಳ್ಳುತ್ತದೆ.