ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ1

ಗಂಗಾಸ್ನಾನ, ತುಂಗಾಪಾನ ಶ್ರೇಷ್ಠವೆಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಸನಾತನ ಧರ್ಮದಲ್ಲಿ ಗಂಗಾನದಿಯನ್ನು ದೇವನದಿ ಎಂದು ಕರೆಯಲಾಗತ್ತೆ. ಹಾಗಾಗಿ ಗಂಗೆಯಲ್ಲಿ ಮಿಂದೆದ್ದರೆ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಅದರಂತೆ, ತುಂಗಾ ನದಿಯ ನೀರನ್ನು ಕುಡಿದರೂ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಆದ್ರೆ ನಿಜಕ್ಕೂ ಗಂಗಾ ಸ್ನಾನ ಪುಣ್ಯದ ಕೆಲಸವಾ..? ಗಂಗಾ ಸ್ನಾನದ ಹಿಂದಿನ ಸತ್ಯವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಮ್ಮೆ ಶಿವ ಮತ್ತು ಪಾರ್ವತಿ ಗಂಗಾ ನದಿ ತೀರದಲ್ಲಿ ವಾಯುವಿಹಾರಕ್ಕೆಂದು ಹೊರಟಿದ್ದರು. ಆಗ ಗಂಗೆಯಲ್ಲಿ ಹಲವರು ಮಿಂದೆದ್ದು, ಶಿವ ನಾಮಸ್ಮರಣೆ ಮಾಡುತ್ತಿದ್ದರು. ಆಗ ಪಾರ್ವತಿ ಆಶ್ಚರ್ಯದಿಂದ ಶಿವನಲ್ಲಿ ಹೀಗೆಂದು ಕೇಳಿದಳು. ಹೇ ಪ್ರಭು, ಇವರಲ್ಲಿ ಹಲವರ ಪಾಪ ನಾಶವಾಗಿಲ್ಲ. ಹಾಗಾಗಿ ಅವರಿಗೆ ಗಂಗೆಯಲ್ಲಿ ಮಿಂದೆದ್ದರೂ ಸಮಾಧಾನವಾಗುತ್ತಿಲ್ಲ ಎನ್ನುವಂತೆ ನನಗೆ ಅನ್ನಿಸುತ್ತಿದೆ. ಹಾಗಾದರೆ, ಈಗ ಗಂಗೆಯ ಪವಿತ್ರತೆ ಕಡಿಮೆಯಾಗಿದೆಯೇ..? ಎಂದು ಪ್ರಶ್ನಿಸುತ್ತಾಳೆ.

ಆಗ ಶಿವ, ಖಂಡಿತ ಇಲ್ಲ ಪಾರ್ವತಿ. ಗಂಗೆ ಈಗಲೂ ಪವಿತ್ರಳೇ. ಆದರೆ ಇವರೆಲ್ಲ ಗಂಗಾ ಸ್ನಾನ ಮಾಡುತ್ತಿಲ್ಲ. ಇವರ ದೇಹ ನದಿಯಲ್ಲಿ ನೆನೆಯುತ್ತಿದೆ ಅಷ್ಟೇ ಎಂದು ಹೇಳುತ್ತಾನೆ. ಆಗ ಪಾರ್ವತಿ ಅದ್ಹೇಗೆ ಹೇಳುತ್ತೀರಿ ಸ್ವಾಮಿ..? ಅವರೆಲ್ಲೂ ನದಿಯಲ್ಲಿ ಮೀಯುತ್ತಿದ್ದಾರೆ. ಅವರ ಬಟ್ಟೆ ಒದ್ದೆಯಾಗಿದೆ. ಎಲ್ಲರೂ ನಿಮ್ಮ ನಾಮಸ್ಮರಣೆ ಮಾಡುತ್ತ ಹೊರಬರುತ್ತಿದ್ದಾರೆ. ಆದರೂ ಅವರಲ್ಲಿ ಏನೋ ಅಸಮಾಧಾನ ಕಾಣುತ್ತಿದೆ ಎನ್ನುತ್ತಾಳೆ.

ಆಗ ಶಿವ, ಈ ಮಾತನ್ನು ನಾನು ನಿನಗೆ ವಿವರಿಸಿದರೆ, ತಿಳಿಯುವುದಿಲ್ಲ. ಬದಲಾಗಿ ನೀನು ಅದನ್ನು ಕಂಡು ಅರಿತುಕೊಳ್ಳಬೇಕು ಎಂದು ಹೇಳುತ್ತಾನೆ. ಮತ್ತು ಇದನ್ನು ಪಾರ್ವತಿಗೆ ಅರ್ಥ ಮಾಡಿಸಲು ಶಿವ ವೃದ್ಧನ ವೇಷಕ್ಕೆ ಬದಲಾಗುತ್ತಾನೆ. ಅಲ್ಲದೇ ಪಾರ್ವತಿಗೂ ವೃದ್ಧೆಯ ರೂಪಕ್ಕೆ ಬರುವಂತೆ ಹೇಳುತ್ತಾನೆ. ಈಗ ಶಿವ ಮತ್ತು ಪಾರ್ವತಿ ವೃದ್ಧರ ರೂಪದಲ್ಲಿ ಗಂಗಾ ತೀರದಲ್ಲಿ ತಿರುಗಾಡುತ್ತಿರುತ್ತಾರೆ.

ಇದಾದ ಬಳಿಕ ಏನಾಗುತ್ತದೆ..? ಗಂಗಾ ಸ್ನಾನ ಮಾಡಿದರೂ, ಮಾಡಿದ ಹಾಗಾಗಲ್ಲ ಅಂತಾ ಶಿವ ಹೇಳಿದ್ದು ಯಾಕೆ ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

About The Author