ಹಿಂದುಗಳಲ್ಲಿ ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಅಂಥ ಹಬ್ಬಗಳಲ್ಲಿ ಹೋಳಿ ಹಬ್ಬ ಕೂಡ ಒಂದು. ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸುವುದೇ ಒಂದು ಮಜಾ. ತಂಪು ಪಾನೀಯ. ತರಹೇವಾರಿ ತಿಂಡಿ ಸವಿಯುವುದೇ ಒಂದು ಸಂತೋಷ. ಇನ್ನು ಹೋಳಿ ಹಬ್ಬ ಆಚರಿಸುವುದಕ್ಕೂ ಮುನ್ನ ಹೋಲಿಕಾ ದಹನವನ್ನೂ ಮಾಡಲಾಗುತ್ತದೆ. ಹಾಗಾದ್ರೆ ಈ ಹೋಲಿಕಾ ದಹನ ಮತ್ತು ಹೋಳಿ ಹಬ್ಬದ ಆಚರಣೆಯ ಹಿಂದಿರುವ ಕಥೆಯೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತಾನೂ ಯಾವ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮನುಷ್ಯ, ರಾಕ್ಷಸ, ದೇವತೆ ಯಾರಿಂದಲೂ ಕೊಲ್ಲಲ್ಪಡಬಾರದು ಎಂದು ಹಿರಣ್ಯ ಕಶಪು ವರ ಪಡೆದಿದ್ದ. ಹೀಗಾಗಿ ಯಾವ ದೇವತೆಗಳೂ, ಇವನನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಆತ ತಾನೇ ದೇವರು ಎಂಬಂತೆ, ಅಹಂಕಾರ ಮಾಡತೊಡಗಿದ. ಜನ ವಿಷ್ಣುವನ್ನು ಬಿಟ್ಟು ತನ್ನನ್ನೇ ಪೂಜಿಸುವಂತೆ ಒತ್ತಾಯಿಸುತ್ತಿದ್ದ. ವಿಷ್ಣುವಿನ ಪೂಜೆ ಮಾಡಿದವರಿಗೆ ಶಿಕ್ಷೆ ನೀಡುತ್ತಿದ್ದ. ಆದರೆ ಆತನ ಮಗ ಪ್ರಹ್ಲಾದ ವಿಷ್ಣುವಿನ ಪರಮ ಭಕ್ತನಾಗಿದ್ದ. ಹಾಗಾಗಿ ಆತನನ್ನು ಭಕ್ತ ಪ್ರಹ್ಲಾದ ಎಂದು ಕರೆಯಲಾಗುತ್ತಿತ್ತು.
ಒಮ್ಮೆ ಹಿರಣ್ಯ ಕಶಪು, ಪ್ರಹ್ಲಾದನನ್ನು ಕರೆದು, ನಿನ್ನ ಜೀವನದಲ್ಲಿ ಶ್ರೇಷ್ಠ ಧರ್ಮ ಯಾವುದು ಎಂದು ಕೇಳಿದ. ಮಗ ತನ್ನನ್ನು ಹೊಗಳುತ್ತಾನೆ. ತನ್ನನ್ನು ಪೂಜಿಸುವುದೇ ದೊಡ್ಡ ಧರ್ಮವೆನ್ನುತ್ತಾನೆಂದು ಕಶಪು ತಿಳಿದಿದ್ದ. ಆದ್ರೆ ಪ್ರಹ್ಲಾದ, ವಿಷ್ಣುವನ್ನು ಪೂಜಿಸುವುದೇ ಶ್ರೇಷ್ಠ ಧರ್ಮವೆಂದು ಹೇಳಿದ. ಕೋಪಗೊಂಡ ಹಿರಣ್ಯ ಕಶಪು, ಪ್ರಹ್ಲಾದನಿಗೆ ಹೊಡೆಯಲು ಆರಂಭಿಸಿದ, ಕಶಪುವಿನ ಪತ್ನಿ ಬಂದು, ಆತನನ್ನು ತಡೆದಳು.
ಬೆಟ್ಟದಿಂದ ಉರುಳಿಸಿ ಕೊಲ್ಲಲು, ಪಟ್ಟದಾನೆಯ ಕಾಲಲಿ ತುಳಿಸಲು, ಊಟದಲ್ಲಿ ವಿಷವನಿಟ್ಟು ಭೋಜನ ಮಾಡಲು, ಅಟ್ಟ ಅಡವಿಯಲ್ಲಿ ಕಳುಹಿಸಿ, ಪ್ರಾಣಿಗಳಿಂದ ಸಾಯಿಸಲು, ಹೀಗೆ ಪ್ರಹ್ಲಾದನನ್ನು ಕೊಲ್ಲಲು ಹಿರಣ್ಯ ಕಶಪು ಹಲವಾರು ಪ್ರಯತ್ನ ಮಾಡಿದ. ಆಗ ಪ್ರಹ್ಲಾದ ಶ್ರೀ ವಿಷ್ಣುವಿನ ಜಪ ಮಾಡಿ, ಬದುಕಿ ಬಂದ. ಇದ್ಯಾವುದೂ ಸಾಧ್ಯವಾಗದ ಕಾರಣ, ಕಶಪು ತನ್ನ ತಂಗಿಯಾದ ಹೋಲಿಕಾಳ ಕೈಯಿಂದ ಪ್ರಹ್ಲಾದನನ್ನು ಕೊಲ್ಲಿಸಲು ಪ್ರಯತ್ನ ಪಟ್ಟ.
ಹೋಲಿಕಾಳ ಬಳಿ ಒಂದು ವಸ್ತ್ರವಿತ್ತು. ಆಕೆ ಆ ವಸ್ತ್ರವನ್ನು ಧರಿಸಿದರೆ, ಆಕೆಯ ಜೀವಕ್ಕೇನೂ ಅಪಾಯವಾಗುತ್ತಿರಲಿಲ್ಲ. ಆ ವಸ್ತ್ರವನ್ನು ಧರಿಸಿ, ಚಿತೆಯ ಮೇಲೆ ನನ್ನ ಮಗನನ್ನು ಹಿಡಿದು ಕುಳಿತುಕೋ. ನನ್ನ ಶತ್ರುವನ್ನು ಪೂಜಿಸುವ ಮಗ ನನಗೆ ಬೇಡವೆಂದು ಹೇಳಿದಾಗ, ಹೋಲಿಕಾ ಪ್ರಹ್ಲಾದನನ್ನು ಹಿಡಿದು, ಚಿತೆಯ ಮೇಲೆ ಕುರೂತ್ತಾಳೆ. ಚಿತೆಗೆ ಬೆಂಕಿ ಹಚ್ಚಲಾಗತ್ತೆ. ಪ್ರಹ್ಲಾದ ವಿಷ್ಣುವನ್ನು ಸ್ಮರಿಸಿ, ಪ್ರಾಣಾಪಾಯದಿಂದ ಪಾರಾಗುತ್ತಾನೆ. ಹೋಲಿಕಾ ಸುಟ್ಟು ಹೋಗುತ್ತಾಳೆ. ಈ ದಿನವನ್ನೇ ಹೋಳಿ ಹಬ್ಬವೆಂದು ಆಚರಿಸಲಾಗುತ್ತದೆ.