Janmashtami Special: ಶ್ರೀಕೃಷ್ಣ ಜನ್ಮಾಷ್ಠಮಿಗೆ ಹಲವರು ಛಪ್ಪನ್ನಾರು ಭೋಜನವನ್ನು ನೈವೇದ್ಯ ಮಾಡುತ್ತಾರೆ. ಆದರೆ ಯಾಕೆ ಶ್ರೀಕೃಷ್ಣನಿಗೆ 56 ಭೋಜನವನ್ನು ನೈವೇದ್ಯ ಮಾಡುತ್ತಾರೆಂದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಪುರಾಣ ಕಥೆಗಳಿದೆ. ಆ ಕಥೆ ಏನೆಂದು ತಿಳಿಯೋಣ ಬನ್ನಿ..
ಮಥುರೆಯಲ್ಲಿ ಎಲ್ಲರೂ ಇಂದ್ರನ ಪೂಜೆ ಮಾಡುತ್ತಿದ್ದರು. ಇಂದ್ರನನ್ನು ಪ್ರಸನ್ನಗೊಳಿಸಿದರೆ, ಇಂದ್ರದೇವ ಸರಿಯಾಗಿ ಮಳೆ ಬರುವಂತೆ ಮಾಡುತ್ತಾನೆ. ಮತ್ತು ತಾವು ಉತ್ತಮ ಬೆಳೆ ಬೆಳೆದು ಜೀವನ ಸಾಗಿಸಬಹುದು ಅನ್ನೋ ನಂಬಿಕೆ ಅಲ್ಲಿನ ಜನರಲ್ಲಿತ್ತು. ಹಾಗಾಗಿ ಅವರೆಲ್ಲ ಇಂದರನಿಗಾಗಿ ವಿಶೇಷ ಪೂಜೆ, ಹೋಮ ಹವನ ಮಾಡಲು ಸಿದ್ಧತೆ ನಡೆಸಿದ್ದರು.
ಆಗ ಕೃಷ್ಣ ತನ್ನ ತಂದೆ ನಂದನ ಬಳಿ, ಯಾಕೆ ಪೂಜೆ ಪುನಸ್ಕಾರ..? ಯಾವ ದೇವರಿಗಾಗಿ ಈ ಹೋಮ ಹವನವನ್ನು ಮಾಡುತ್ತಿದ್ದಾರೆಂದು ಕೇಳುತ್ತಾನೆ. ಅದಕ್ಕೆ ನಂದನ, ಇದು ಇಂದ್ರ ದೇವನನ್ನು ಪ್ರಸನ್ನಗೊಳಿಸಲು ಮಾಡುತ್ತಿರುವ ಹೋಮವಾಗಿದೆ. ಈ ಹೋಮದಿಂದ ಇಂದ್ರ ನಮ್ಮ ಮೇಲೆ ಕೃಪೆ ತೋರಿಸಿ, ಉತ್ತಮ ಬೆಳೆ ಬೆಳೆಯಲು ಸಹಾಯವಾಗುತ್ತದೆ ಎನ್ನುತ್ತಾನೆ.
ಅದಕ್ಕೆ ಶ್ರೀಕೃಷ್ಣ, ಅದು ಹೇಗೆ ಸಾಧ್ಯ..? ನಮ್ಮ ಹಸುಗಳಿಗೆ ಗೋವರ್ಧನ ಗಿರಿಯಿಂದ ಹುಲ್ಲು ಸಿಗುತ್ತದೆ. ಗೋವರ್ಧನ ಗಿರಿಯ ಕಾರಣದಿಂದಲೇ, ಜನ ಉತ್ತಮ ಬೆಳೆ ಬೆಳೆಯುತ್ತಿದ್ದಾರೆ. ಅಂದ ಮೇಲೆ ಗೋವರ್ಧನ ಗಿರಿ ನಮಗೆ ಪೂಜನೀಯವಾಗಬೇಕು. ನೀವು ಸುಮ್ಮನೆ ಇಂದ್ರ ದೇವನ ಪೂಜೆ ಮಾಡುತ್ತಿದ್ದೀರಿ ಎನ್ನುತ್ತಾನೆ. ಶ್ರೀಕೃಷ್ಣ ಹೇಳುವುದು ಸರಿ ಎಂದು ನಂದನ ಸೇರಿ, ಮಥುರೆಯ ಎಲ್ಲ ಜನರಿಗೂ ಎನ್ನಿಸಿತು. ಅವರು ಇಂದ್ರನ ಪೂಜೆಯನ್ನು ನಿಲ್ಲಿಸಿ, ಗೋವರ್ಧನ ಗಿರಿಯ ಪೂಜೆ ಮಾಡಲು ಶುರು ಮಾಡಿದರು.
ಇದರಿಂದ ಕ್ರೋಧಗೊಂಡ ಇಂದ್ರ, ಮಥುರೆಯಲ್ಲಿ ಜೋರಾಗಿ ಮಳೆ ಬೀಳುವಂತೆ ಮಾಡುತ್ತಾನೆ. ಮಥುರೆಯ ವಾಸಿಗಳೆಲ್ಲ, ಶ್ರೀಕೃಷ್ಣನ ಮೊರೆ ಹೋಗುತ್ತಾರೆ. ಶ್ರೀಕೃಷ್ಣ ತನ್ನ ಕಿರುಬೆರಳಿನಲ್ಲಿ ಗೋವರ್ಧನ ಪರ್ವತ ಹಿಡಿದು, ಮಥುರೆಯ ಜನರನ್ನೆಲ್ಲ ಅದರ ಕೆಳಗೆ ನಿಲ್ಲುವಂತೆ ಹೇಳಿ, ಅವರನ್ನೆಲ್ಲ ಕಾಪಾಡುತ್ತಾನೆ. ಒಂದು ವಾರಗಳ ಕಾಲ ಸತತವಾಗಿ ಮಳೆ ಸುರಿಯುತ್ತದೆ. ಆ 7 ದಿನಗಳಲ್ಲಿ ಒಂದು ದಿನವೂ ಒಂದು ತೊಟ್ಟು ನೀರನ್ನೂ ಕುಡಿಯದೇ, ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಹಿಡಿದುಕೊಂಡು, ಮಥುರೆಯ ಜನರನ್ನು ಕಾಪಾಡುತ್ತಾನೆ.
ಶ್ರೀಕೃಷ್ಣನ ತಾಯಿ ಶ್ರೀಕೃಷ್ಣನಿಗೆ ದಿನಕ್ಕೆ 8 ಬಾರಿ ವಿವಿಧ ಭೋಜನವನ್ನು ಮಾಡಿ ಉಣ ಬಡಿಸುತ್ತಿದ್ದಳು. ಆದರೆ 7 ದಿನ ತನ್ನ ಮಗ ಏನನ್ನೂ ತಿನ್ನಲಿಲ್ಲವೆಂಬ ದುಃಖ ಆ ತಾಯಿಯಲ್ಲಿತ್ತು. ಹಾಗಾಗಿ ಮಳೆ ನಿಂತಾಗ, ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಇಳಿಸಿ, ಮಥುರೆಯ ಜನರನ್ನು ಮಥುರೆಗೆ ಕರೆತಂದ. ಆಗ ಶ್ರೀಕೃಷ್ಣನ ತಾಯಿ ಮತ್ತು ಮಥುರೆಯ ಹೆಣ್ಣು ಮಕ್ಕಳೆಲ್ಲ ಸೇರಿ, 7 ದಿನದ 56 ಭೋಜನವನ್ನು ಒಮ್ಮೆಲೆ ಮಾಡಿ, ತಂದು ಶ್ರೀಕೃಷ್ಣನಿಗೆ ತಿನ್ನಿಸುತ್ತಾರೆ. ಈ ಕಾರಣಕ್ಕೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನು ನೀಡಲಾಗುತ್ತದೆ.