ಗುರುರಾಯರು ಅನ್ನೋ ಪದವೇ, ಶಕ್ತಿ ಕೊಡುವಂಥದ್ದು. ಕಷ್ಟಬಂದಾಗ, ರಾಯರನ್ನು ನೆನೆದರೆ ಸಾಕು, ಯಾವುದಾದರೂ ರೂಪದಲ್ಲಿ ಬಂದು, ಅವರು ನಮ್ಮನ್ನು ಕಾಪಾಡಿಯೇ ಕಾಪಾಡುತ್ತಾರೆಂಬ ನಂಬಿಕೆ ಇದೆ. ಇಂಥ ರಾಯರು, ತಮ್ಮ ಜೀವಿತಾವಧಿಯಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆ. ಆ ಪವಾಡಗಳಲ್ಲಿ ಕೆಲ ಪವಾಡಗಳ ಬಗ್ಗೆ ತಿಳಿಯೋಣ ಬನ್ನಿ..
ಗುರುರಾಯರ ಬಳಿ ಬಂದ ಓರ್ವ ವ್ಯಕ್ತಿ ಗರ್ವದಿಂದ ಗಂಧ ತೇಯ್ದು ಕೊಡಲು ಹೇಳಿದರು. ಆಗ ಗುರುಗಳು ಅಗ್ನಿಸೂಕ್ತವನ್ನು ಹೇಳುತ್ತಿದ್ದರು. ಹಾಗೆ ಅಗ್ನಿಸೂಕ್ತವನ್ನು ಹೇಳುತ್ತಲೇ, ಗಂಧ ತೇಯ್ದು ಕೊಟ್ಟರು. ಅದನ್ನು ಮೈಗೆ ಹಚ್ಚಿಕೊಂಡವರ ಮೈಯೆಲ್ಲ ಉರಿಯತೊಡಗಿತು. ಯಾಕೆಂದು ಅರಿತಾಗ, ಗುರುಗಳು ಅಗ್ನಿಸೂಕ್ತವನ್ನು ಹೇಳಿದ್ದರಿಂದ ಅದರ ಪ್ರಭಾವ ಶ್ರೀಗಂಧದ ಮೇಲೆ ಬೀರಿತ್ತು. ಆಗ ಗುರುಗಳ ಬಳಿ ಬಂದ ವ್ಯಕ್ತಿ, ಕ್ಷಮೆ ಕೇಳಿ, ಮತ್ತೊಮ್ಮೆ ಶ್ರೀಗಂಧ ತೇಯ್ದು ಕೊಡಿ ಎಂದು ಕೇಳಿದನಂತೆ. ಈ ಬಾರಿ ಗುರುಗಳು ವರುಣಸೂಕ್ತವನ್ನು ಹೇಳುತ್ತ ಶ್ರೀಗಂಧ ತೇಯ್ದರು. ಆಗ ಅದನ್ನು ಹಚ್ಚಿಕೊಂಡವರ ಮೈ ತಂಪಾಗಿತ್ತಂತೆ. ಇದು ರಾಯರ ಮೊದಲ ಪವಾಡ.
ಒಮ್ಮೆ ಅಸತ್ ಉಲ್ಲಾ ಖಾನ್ ಎಂಬ ನವಾಬನ ಅರಮನೆಗೆ ರಾಯರು ಆಗಮಿಸಿದ್ದರು. ಆ ನವಾಬನಿಗೆ ಗುರುಗಳ ಮೇಲೆ ನಂಬಿಕೆ ಇರಲಿಲ್ಲ. ಅವನು ರಾಯರನ್ನು ಪರೀಕ್ಷಿಸುವುದಕ್ಕಾಗಿ ಮಾಂಸದ ತಟ್ಟೆಯನ್ನು ತಂದು ರಾಯರ ಮುಂದೆ ಇಡುತ್ತಾನೆ. ಅದನ್ನು ಸ್ವೀಕರಿಸುವಂತೆ ಹೇಳುತ್ತಾನೆ. ರಾಯರು ನಸುನಗುತ್ತ, ಆ ತಟ್ಟೆಯ ಮೇಲೆ ತೀರ್ಥವನ್ನು ಪ್ರೋಕ್ಷಿಸುತ್ತಾರೆ. ಆ ಮಾಂಸ ಹಣ್ಣಾಗಿ ಪರಿವರ್ತನೆಯಾಗುತ್ತದೆ. ಆಗ ನವಾಬ, ರಾಯರ ಪವಾಡ ಕಂಡು ಆಶ್ಚರ್ಯಚಕಿತನಾಗುತ್ತಾನೆ. ಮತ್ತು ಕ್ಷಮೆ ಕೇಳಿ, ರಾಯರ ಸೇವೆ ಮಾಡುತ್ತಾನೆ.
ಒಮ್ಮೆ ಭಕ್ತರೊಬ್ಬರು ರಾಯರನ್ನು ತಮ್ಮ ಮನೆಗೆ ಭೋಜನಕ್ಕೆಂದು ಕರೆಯುತ್ತಾರೆ. ಅವರಿಗೆ ಒಬ್ಬನೇ ಒಬ್ಬ ಮಗನಿರುತ್ತಾನೆ. ಅವನು ಆಟವಾಡುತ್ತ ಭೋಜನ ತಯಾರಿಸುವ ಜಾಗಕ್ಕೆ ಬರುತ್ತಾನೆ. ಮತ್ತು ಅಲ್ಲಿದ್ದ ದೊಡ್ಡ ಪಾತ್ರೆಯಲ್ಲಿ ಕುದಿಯುತ್ತಿರುವ ಪದಾರ್ಥದಲ್ಲಿ ಬಿದ್ದು ಸತ್ತುಹೋಗುತ್ತಾನೆ. ಆ ಮಗುವಿನ ತಂದೆ ತಾಯಿ ರಾಯರ ಬಳಿ ಬಂದು, ತಮ್ಮ ಮಗುವನ್ನು ಬದುಕಿಸಿಕೊಡುವಂತೆ ಕೇಳುತ್ತಾರೆ. ರಾಯರು ಮಂತ್ರೋಚ್ಛಾರಣೆ ಮಾಡುವ ಮೂಲಕ ತಮ್ಮ ಬಳಿ ಇದ್ದ ತೀರ್ಥವನ್ನು ಪ್ರೋಕ್ಷಣೆ ಮಾಡಿ, ಆ ಮಗುವನ್ನು ಬದುಕಿಸುತ್ತಾರೆ.
ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1
ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 2
ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..