ಸಾಮಾನ್ಯವಾಗಿ ಮಕ್ಕಳು ಮಾಡಿದ ತಪ್ಪಿಗೆ, ಅಪ್ಪ ಅಮ್ಮ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಕೆಲ ಕಡೆ ನಿಜವೂ ಆಗುತ್ತದೆ. ಮಕ್ಕಳು ತಪ್ಪು ಮಾಡಿದಾಗ, ಅಪ್ಪ ಅಮ್ಮ ಬೈಯ್ಯಿಸಿಕೊಳ್ಳಬೇಕಾಗುತ್ತದೆ. ಮರ್ಯಾದೆ ಹೋಗುವ ಭಯವೂ ಇರುತ್ತದೆ. ಆದ್ರೆ ಯಮ ಮತ್ತು ಆತನ ಪುತ್ರಿಯ ಕಥೆಯನ್ನ ಹೇಳುವ ಮೂಲಕ, ಅಪ್ಪ ಅಮ್ಮ ಮಾಡಿದ ತಪ್ಪಿಗೆ ಮಕ್ಕಳೂ ಶಿಕ್ಷೆ ಅನುಭವಿಸಬೇಕಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ ಬನ್ನಿ..
ಪದ್ಮ ಪುರಾಣದಲ್ಲಿ ವರ್ಣಿತವಾಗಿರುವ ಕಥೆಯ ಪ್ರಕಾರ, ಮೃತ್ಯು ದೇವರಾದ ಯಮಧರ್ಮನಿಗೆ ಓರ್ವ ಪುತ್ರಿ ಇದ್ದಳು. ಆಕೆಯ ಹೆಸರು ಸುನೀತಾ. ಆಕೆ ತನ್ನ ಅಪ್ಪ, ನರಕದಲ್ಲಿ ಶಿಕ್ಷೆ ಕೊಡುವುದನ್ನು ನೋಡುತ್ತಿದ್ದಳು. ಆದ್ರೆ ಅವಳಿಗೆ ಕೆಟ್ಟ ಮತ್ತು ಒಳ್ಳೆಯ ಕೆಲಸದ ನಡುವಿರುವ ಅಂತರದ ಬಗ್ಗೆ ವ್ಯತ್ಯಾಸ ಗೊತ್ತಿರಲಿಲ್ಲ. ಆಕೆ ಆಟವಾಡುತ್ತ, ಸುಮ್ಮ ಸುಮ್ಮನೆ ಒಳ್ಳೆಯ ಕಾರ್ಯದಲ್ಲಿ ವಿಘ್ನ ಉಂಟು ಮಾಡುವುದು. ಕಾರಣವಿಲ್ಲದೇ, ಪಾಪದ ವ್ಯಕ್ತಿಗಳು ಸಾಯುವಂತೆ ಮಾಡುತ್ತಿದ್ದಳು.
ಒಮ್ಮೆ ಓರ್ವ ಗಂಧರ್ವ ಕುಮಾರ ತಪಸ್ಸು ಮಾಡುತ್ತಿದ್ದ. ಯೋಗ ಮುದ್ರೆಯಲ್ಲಿ ಕುಳಿತಿದ್ದ ಆತನಿಗೆ, ಸುನಿತಾ ತನ್ನ ಜಡೆಯಿಂದ ಹೊಡೆಯಲು ಶುರು ಮಾಡಿದಳು. ಅವನಿಗೆ ರಕ್ತ ಬರುವವರೆಗೂ ಆಕೆ ಜಡೆಯಿಂದ ಹೊಡೆದಳು. ನೋವು ತಾಳಲಾಗದೇ, ಆ ಗಂಧರ್ವ ಕುಮಾರ, ತಪಸ್ಸನ್ನು ಅರ್ಧಕ್ಕೆ ಮೊಟಕುಗೊಳಿಸಿದ. ನರಳಾಡಲು ಶುರು ಮಾಡಿದ. ಅದನ್ನು ನೋಡಿ ಸುನಿತಾ ನಗಲಾರಂಭಿಸಿದಳು. ಖುಷಿ ಪಟ್ಟಳು. ಯಮನ ಬಳಿ ತಾನು ಮಾಡಿದ ಕೆಲಸದ ಬಗ್ಗೆ ಹೇಳಿದಳು. ಆದ್ರೆ ಯಮರಾಜ, ಅವಳಿನ್ನೂ ಚಿಕ್ಕವಳು, ಗೊತ್ತಿಲ್ಲದೇ ತಪ್ಪು ಮಾಡಿದ್ದಾಳೆಂದು ತಿಳಿದು ಸುಮ್ಮನಾಗುತ್ತಿದ್ದ.
ಹೀಗೆ ಕಾಲ ಮುಂದೆ ಸಾಗುತ್ತ ಸಾಗುತ್ತ ಸುನಿತಾ ಕೊಂಚ ದೊಡ್ಡವಳಾಗುತ್ತಾಳೆ. ಮತ್ತೆ ಅದೇ ಗಂಧರ್ವ ಕುಮಾರನಿಗೆ, ಅದೇ ರೀತಿ ತೊಂದರೆ ಕೊಡುತ್ತಾಳೆ. ಈ ಬಾರಿ ಗಂಧರ್ವ ಸಿಟ್ಟಿನಿಂದ ಸುನಿತಾಳಿಗೆ ಶಾಪ ನೀಡಿದ. ನೀನು ಓರ್ವ ಋಷಿ ಪುತ್ರನಿಗೆ ವಿವಾಹವಾಗುತ್ತಿಯಾ, ನಿನಗೋರ್ವ ಮಗ ಜನಿಸುತ್ತಾನೆ. ನೀನು ಮಾಡಿದ ಹಲವು ತಪ್ಪಿಗೆ, ಅವನಲ್ಲಿ ದುಷ್ಟತನಗಳು ತುಂಬುತ್ತದೆ. ನಿನ್ನ ತಪ್ಪಿಗೆ ನಿನ್ನ ಪುತ್ರ ಶಿಕ್ಷೆ ಅನುಭವಿಸುತ್ತಾನೆ ಎಂದು ಹೇಳುತ್ತಾನೆ.
ಸುನೀತಾ ಈ ವಿಷಯವನ್ನ ಅಪ್ಪನಲ್ಲಿ ಬಂದು ಹೇಳುತ್ತಾಳೆ. ಆಗ ಯಮರಾಜನಿಗೆ ಪಶ್ಚಾತಾಪವಾಗುತ್ತದೆ. ನಾನು ಮೊದಲಿನಿಂದಲೂ ಮಗಳ ತಪ್ಪನ್ನು ತಿದ್ದಬೇಕಿತ್ತು ಎಂದು ಯಮರಾದ ಪಶ್ಚಾತಾಪ ಪಡುತ್ತಾನೆ. ನಂತರ ಸುನಿತಾಳಿಗೆ ಅಪ್ಸರಾ ರಂಭೆ ಮೋಹಿನಿ ವಿದ್ಯೆಯ ಜ್ಞಾನ ನೀಡಿದಳು. ಆಗ ಸುನಿತಾ ಈ ವಿದ್ಯೆಯ ಮೂಲಕ ಓರ್ವ ರಾಜನನ್ನು ಮೋಹಿತಗೊಳಿಸಿ, ಆತನೊಂದಿಗೆ ವಿವಾಹವಾದಳು.
ಇವರಿಗೆ ಓರ್ವ ಪುತ್ರ ಜನಿಸಿದ. ಅವನಿಗೆ ವೇನ ಎಂದು ನಾಮಕರಣ ಮಾಡಲಾಯಿತು. ಅವನಿಗೆ ವೇದ, ವಿಜ್ಞಾನಗಳ ಬಗ್ಗೆ ಜ್ಞಾನ ನೀಡಲಾಯಿತು. ಪುತ್ರ ಬುದ್ಧಿವಂತನಾದ. ಆದ್ರೆ ಶಾಪವಿದ್ದ ಕಾರಣ, ಅವನು ಕೆಟ್ಟವರ ಸಂಗ ಮಾಡಿ, ಕೆಟ್ಟ ಕೆಲಸ ಮಾಡಲು ಶುರು ಮಾಡಿದ. ಭಕ್ತಿ, ಹೋಮ ಹವನವನ್ನೆಲ್ಲ ಮೂರ್ಖತೆ ಎಂದು ತಿಳಿದಿದ್ದ. ಪುತ್ರ ಹೀಗಾದ ಹೇಳಿ ರಾಜ ರಾಜ್ಯಭಾರ ತ್ಯಜಿಸಿ, ಸನ್ಯಾಸಿಯಾಗಿ ಹೋದ. ರಾಜನ ಪಟ್ಟ ಸಿಕ್ಕ ಮೇಲೆ ವೇನನಿಗೆ ಅಹಂಕಾರ ಬಂತು.
ಅವನು ದುರ್ಜನರಿಗೆ ಸ್ಥಾನ ಮಾನ ಕೊಟ್ಟ, ದೇವಸ್ಥಾನ ಮುಚ್ಚಿಸಿದ. ಯಾರೂ ಹೋಮ ಹವನ ಮಾಡಬಾರದು ಎಂದು ಹೇಳಿದ. ರಾಜ್ಯದ ಜನರಿಗೆ ಕೋಪ ಬಂದು ಅವನನ್ನು ರಾಜನ ಪಟ್ಟದಿಂದ ಇಳಿಸಿ, ಬೇರೆಯವರನ್ನು ರಾಜನನ್ನಾಗಿ ಮಾಡಲಾಯಿತು. ಹೀಗೆ ವೇನುವಿನ ಸೊಕ್ಕು ಮುರಿಯಿತು. ಇದರಿಂದ ಸುನಿತಾ ಮಾಡಿದ ತಪ್ಪಿಗೆ, ಅವಳ ಮಗ ವೇನು ದುರ್ಜನರ ಸಂಗ ಮಾಡಿ, ದುರಭ್ಯಾಸ ಕಲಿತು, ಕೊನೆಗೆ ವನವಾಸ ಅನುಭವಿಸಬೇಕಾಯಿತು.