Spiritual: ಭಾರತದಲ್ಲಿ ಗಲ್ಲಿ ಗಲ್ಲಿಗೂ ದೇವಸ್ಥಾನವಿದೆ. ಆ ಪ್ರತೀ ದೇವಸ್ಥಾನಕ್ಕೂ ತನ್ನದೇ ಆದ ಇತಿಹಾಸವಿದೆ. ಕೆಲವು ಸಣ್ಣ ಪುಟ್ಟ ದೇವಸ್ಥಾನಗಳಲ್ಲಿ ಬಿಟ್ಟರೆ, ಹಲವು ದೇವಸ್ಥಾನಗಳಲ್ಲಿ ಕಲ್ಯಾಣಿ ಇದೆ. ಹಾಗಾದ್ರೆ ದೇವಸ್ಥಾನದಲ್ಲಿ ಕಲ್ಯಾಣಿ ಇರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಹಳೆಯ ಕಾಲದಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ, ಉಳಿದುಕೊಳ್ಳಲು ರೂಮ್ಗಳ ವ್ಯವಸ್ಥೆ ಇರುತ್ತಿರಲಿಲ್ಲ. ಸಂಬಂಧಿಕರಿದ್ದರೆ, ಅವರ ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿಯೇ ಜನ ತಂಗುತ್ತಿದ್ದರು. ಕೆಲವರು ಧರ್ಮಚತ್ರಗಳಲ್ಲಿ ನಿಲ್ಲುತ್ತಿದ್ದರು. ಹೀಗೆ ದೇವಸ್ಥಾನಗಳಲ್ಲಿ ಜನ ತಂಗಿದ್ದಾಗ, ಅವರು ಸ್ನಾನಾದಿಗಳನ್ನು ಮಾಡಲು, ಪೂಜೆ, ಸಂಧ್ಯಾವಂದನೆಗಳನ್ನು ಮಾಡಲು ಶುದ್ಧ ನೀರಿನ ಅವಶ್ಯಕತೆ ಇತ್ತು. ಹಾಗಾಗಿ ದೇವಸ್ಥಾನಗಳಲ್ಲಿ ಕಲ್ಯಾಣಿಗಳನ್ನು ನಿರ್ಮಿಸುತ್ತಿದ್ದರು.
ಈಗಲೂ ಕೂಡ ಆ ದೇವಸ್ಥಾನದ ಅರ್ಚಕರು, ದೇವಸ್ಥಾನದ ಕಲ್ಯಾಣಿಯಲ್ಲಿ ಮಿಂದು, ಮಡಿ ಬಟ್ಟೆಯಲ್ಲಿ ದೇವರ ಪೂಜೆ ಮಾಡುತ್ತಾರೆ. ನದಿಗಳಲ್ಲಿ ಕೆಲವರು ಕಸ, ಮಲ, ಮೂತ್ರ ವಿಸರ್ಜನೆ ಮಾಡಿ, ಹಾಳು ಮಾಡುವ ಸಂಭವವಿರುತ್ತದೆ. ಆದರೆ ಕಲ್ಯಾಣಿ ದೇವಸ್ಥಾನದಲ್ಲೇ ಇರುವುದರಿಂದ, ಮತ್ತು ಅಲ್ಲಿ ಜನರ ಕಣ್ಗಾವಲು ಇರುವುದರಿಂದ, ಆ ರೀತಿ ಕಲ್ಮಶ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಲ್ಯಾಣಿಯಲ್ಲೇ ಮಿಂದು, ಪೂಜೆ ಮಾಡಲಾಗುತ್ತದೆ.
ಇಷ್ಟೇ ಅಲ್ಲದೇ, ಶುದ್ಧವಾದ ಕಲ್ಯಾಣಿ ಇರುವ ಜಾಗದಲ್ಲಿ ಸುಂದರವಾದ, ಮೌನ ವಾತಾವರಣವಿರುತ್ತದೆ. ಹಕ್ಕಿಗಳ ಚಿಲಿಪಿಲಿ ಇರುತ್ತದೆ. ಇಂಥ ಸ್ಥಳಗಳಲ್ಲಿ ಕುಳಿತು ಧ್ಯಾನ ಮಾಡಬಹುದು. ದೇವರನ್ನು ಸ್ಮರಿಸಬಹುದು. ಪುಸ್ತಕ ಓದಬಹುದು. ಕೆಲ ಕಾಲ ಕುಳಿತುಕೊಂಡು ಮನಸ್ಸಿಗೆ ನೆಮ್ಮದಿ ಪಡೆಯಬಹುದು. ನೀವು ಅಲ್ಲಿ ಹರಟೆ ಹೊಡೆಯಬೇಕು ಎಂದುಕೊಂಡರು, ಹರಟಲಾಗುವುದಿಲ್ಲ. ಏಕೆಂದರೆ, ನಿಮ್ಮ ಧ್ವನಿ ಜೋರಾಗಿ ಕೇಳುತ್ತದೆ. ಈ ಕಾರಣಕ್ಕಾಗಿ ಯಾರೂ ಅಲ್ಲಿ ಜೋರಾಗಿ ಮಾತನಾಡುವುದಿಲ್ಲ. ಇಂಥ ಶಾಂತ ವಾತಾವರಣ ನಿರ್ಮಿಸಲು ಕಲ್ಯಾಣಿ ಅನುಕೂಲವಾಗಿರುತ್ತದೆ. ಹಾಗಾಗಿ ದೇವಸ್ಥಾನದಲ್ಲಿ ಪ್ರಾಚೀನ ಕಾಲದಿಂದಲೂ, ಕಲ್ಯಾಣಿ ನಿರ್ಮಿಸಲಾಗುತ್ತಿದೆ.