Health Tips: ಮಾನಸಿಕ ದೌರ್ಬಲ್ಯ, ಮಾನಸಿಕ ಖಿನ್ನತೆ, ಸಲಿಂಗ ಕಾಮ ಸೇರಿ ಹಲವು ವಿಷಯಗಳ ಬಗ್ಗೆ ಮನೋವೈದ್ಯರಾದ ಡಾ. ಶ್ರೀಧರ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಅದೇ ರೀತಿ ಇಂದು, ಮಾನಸಿಕವಾಗಿ ಕುಗ್ಗಲು ಏನೇನು ಕಾರಣವಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಯಾವುದೋ ಒಂದು ವಿಷಯದಲ್ಲಿ ಅವಮಾನವಾಯಿತು ಎಂದು ಯಾರೂ ಸ್ವಹಾನಿ ಮಾಡಿಕೊಳ್ಳುವುದಿಲ್ಲ. ಬದಲಾಗಿ ಅವರನ್ನು ಯಾರಾದರೂ ಹಂಗಿಸಿದಾಗ, ಮನೆಯಲ್ಲಿ ಕೊಂಕು ಮಾತನಾಡುವ ಜನರಿದ್ದಾಗ, ಗೇಲಿ ಮಾಡುವ ಸ್ನೇಹಿತರಿದ್ದಾಗ ವ್ಯಕ್ತಿಗೆ ಅಸಮಾಧಾನಕರ ವಾತಾವರಣ ಎನ್ನಿಸುತ್ತದೆ. ಇಂಥವರು ಹೇಳುವುದಕ್ಕೂ, ನನಗೆ ಅವಮಾನವಾಗುವುದಕ್ಕೂ ಸರಿಯಾಯಿತು ಎಂಬಂತೆ, ಆ ವ್ಯಕ್ತಿ ಅವಮಾನ ತಡೆಯಲಾಗದೇ, ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಆಗಲೇ ಸ್ವಹಾನಿಯಂಥ ಕೆಲಸಕ್ಕೆ ಆತ ಕೈ ಹಾಕೋದು.
ಪ್ರೀತಿಯಲ್ಲಿ ಮೋಸ ಹೋಗುವವರು, ವಿವಾಹ ನಿಂತು ಹೋಗುವುದು, ಪರೀಕ್ಷೆಯಲ್ಲಿ ಫೇಲ್ ಆಗುವುದು. ಇದೆಲ್ಲ ಜೀವನದಲ್ಲಿ ಕಾಮನ್ ಆಗಿರುತ್ತದೆ. ಆದರೆ, ಇದೇ ದೊಡ್ಡ ಜೀವನ ವೈಫಲ್ಯ ಎಂಬಂತೆ, ಕೊಂಕು ಮಾತನಾಡುವವರು, ಹಂಗಿಸುವವರು, ಗೇಲಿ ಮಾಡುವವರು, ಅವಮಾನಿಸುವವರೂ ಇರುತ್ತಾರೆ. ಅಂಥವರ ಮಾತಿನಿಂದ, ಮನುಷ್ಯ ಮಾನಸಿಕ ದೌರ್ಬಲ್ಯಕ್ಕೀಡಾಗುತ್ತಾನೆ. ಆದರೆ ಅದು ಯಾರಿಗೂ ಕಾಣುವುದಿಲ್ಲ. ಬರೀ ಪ್ರೇಮ ವೈಫಲ್ಯ, ವಿಚ್ಛೇದನ, ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಸ್ವಹಾನಿ ಮಾಡಿಕೊಂಡರೆಂದು ಹೇಳಲಾಗುತ್ತದೆ.
ಮಗ ಪರೀಕ್ಷೆಯಲ್ಲಿ ರ್ಯಾಂಕ್ ಬರಲೇಬೇಕೆಂದು, ತಂದೆ ತಾಯಿ ಅವನ ಮೇಲೆ ಒತ್ತಡ ಹೇರುತ್ತಾರೆ. ನೀನು ಪ್ರೀತಿಸಿದ ಹುಡುಗಿ ನಿನಗೆ ಸಿಗಲ್ಲ ಬಿಡು ಎಂದು ಸ್ನೇಹಿತರು ಕಾಲೆಳೆದಿರುತ್ತಾರೆ. ನೀನು ನಿನ್ನ ಜೀವನ ಸಂಗಾತಿಯ ಜೊತೆ ನೆಮ್ಮದಿಯಾಗಿ ಇರೋಕ್ಕೆ ಸಾಧ್ಯಾನೇ ಇಲ್ಲಾ ಬಿಡು ಎಂದು ಯಾರೋ ಸಂಬಂಧಿಕರು ಹೇಳಿರುತ್ತಾರೆ. ಅದೇ ರೀತಿ ರಿಸಲ್ಟ್ ಬಂದಾಗ, ಆ ವ್ಯಕ್ತಿ ಅವಮಾನ ತಾಳದೇ, ಸ್ವಹಾನಿ ಮಾಡಿಕೊಳ್ಳುತ್ತಾನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..