Spiritual News: ನಮ್ಮ ಜೀವನದಲ್ಲಿ ಏನೇನು ಆಗಬೇಕು ಅಂತಾ ದೇವರು ಮೊದಲೇ ಬರೆದಿರುತ್ತಾನೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಅದೇ ರೀತಿ ಶ್ರೀರಾಮ ವನವಾಸ ಮಾಡಲು ಕೂಡ, ಕಾರಣವಿತ್ತು. ಕೈಕೆ ಸುಮ್ಮನೆ ಶ್ರೀರಾಮನಿಗೆ ವನವಾಸಕ್ಕೆ ಕಳುಹಿಸಿರಲಿಲ್ಲ. ಅದರ ಹಿಂದೆ ಲೋಕ ಕಲ್ಯಾಣದ ಕಾರಣವಿತ್ತು. ಶ್ರೀರಾಮನ ವನವಾಸದ ಕಾರಣ ತಿಳಿಯೋಣ ಬನ್ನಿ..
ಶ್ರೀರಾಮನನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದವರಲ್ಲಿ ಕೈಕೆ ಕೂಡ ಒಬ್ಬಳು. ಆಕೆಗೆ ಭರತನು ಹೇಗೆ ಮಗನೋ, ಅದೇ ರೀತಿ ಶಾಂತಮೂರ್ತಿಯಾದ ಶ್ರೀರಾಮ ಕೂಡ ಪ್ರೀತಿಯ ಮಗ. ಇಂಥ ಮಗನನ್ನು ಕೈಕೆ ಸೀತೆಯೊಡನೆ ವನವಾಸಕ್ಕೆ ಕಳುಹಿಸಲು ಕೂಡ ಮುಖ್ಯವಾದ ಕಾರಣವಿದೆ. ಆಕೆ ದುಷ್ಟೆಯಾಗಿದ್ದರೆ, ಶ್ರೀರಾಮನನ್ನು ಜನ್ಮಪೂರ್ತಿ ವನವಾಸಕ್ಕೆ ಕಳುಹಿಸಬಹುದಿತ್ತು. ಆದರೆ ಆಕೆ ಬರೀ 14 ವರ್ಷವಷ್ಟೇ ಶ್ರೀರಾಮ ವನವಾಸಕ್ಕೆ ಹೋಗಬೇಕು ಎಂದು ಹೇಳಿದ್ದಳು.
ಏಕೆಂದರೆ ಈ 14 ವರ್ಷಗಳಲ್ಲಿ ಶ್ರೀರಾಮ ಲೋಕಕ್ಕೆ ಮಾರಕವಾಗಿದ್ದ ಹಲವು ರಾಕ್ಷಸರ ಸಂಹಾರ ಮಾಡಬೇಕಿತ್ತು. ಹಾಗಾಗಿ ಆ ವೇಳೆಯಲ್ಲಿ ಕೈಕೆ ಶ್ರೀರಾಮನನ್ನು ವನವಾಸಕ್ಕೆ ಕಳುಹಿಸಿದಳು. ಇನ್ನು ಕೈಕೆ ಮಾತನ್ನು ಮೀರದೇ, ದಶರಥ ತನ್ನ ಮಗನನ್ನು ವನವಾಸಕ್ಕೆ ಕಳುಹಿಸಲು ಕಾರಣವೂ ಇತ್ತು. ಒಮ್ಮೆ ತ್ರೇತಾಯುಗದಲ್ಲಿ ರಾಕ್ಷಸರು ಮತ್ತು ದೇವತೆಗಳ ಮಧ್ಯೆ ಘೋರ ಯುದ್ಧ ನಡೆದಿತ್ತು. ದಶರಥ ದೇವತೆಗಳ ಪರ ನಿಂತು ಹೋರಾಡುತ್ತಿದ್ದ. ಅವನಿಗೆ ಸಾಥ್ ನೀಡಿದ್ದ ಕೈಕೆ, ರಾಕ್ಷಸರೊಂದಿಗೆ ಕಾದಾಡಿ, ಯುದ್ಧ ಗೆಲ್ಲಲು ಕಾರಣವಾಗಿದ್ದಳು. ಆಗ ದಶರಥ ಅವಳಿಗೆ ಬೇಕಾದ ಉಡುಗೊರೆ ಕೇಳಲು ಹೇಳಿದ್ದ. ಅದಕ್ಕೆ ಕೈಕೆ, ನಾನು ಸಮಯ ಬಂದಾಗ ಉಡುಗೊರೆ ಕೇಳುವೆ ಎಂದು ಹೇಳಿದ್ದಳು.
ಇದಾದ ಬಳಿಕ ಹಲವು ವರ್ಷಗಳಾದ ಮೇಲೆ ಯಾರಿಗೆ ಪಟ್ಟಾಭಿಷೇಕವೆಂಬ ಚರ್ಚೆ ನಡೆಯುತ್ತದೆ. ಹಿರಿಯವನಾದ ಶ್ರೀರಾಮನಿಗೆ ಅಯೋಧ್ಯೆಯ ರಾಜನ ಪಟ್ಟ ಕಟ್ಟಬೇಕು ಎಂಬ ನಿರ್ಧಾರಕ್ಕೆ ರಾಜಾ ದಶರಥ ಬರುತ್ತಾನೆ. ಆದರೆ ಮಂಥರೆಯ ಮಾತು ಕೇಳಿ, ಕೈಕೆ ತನಗೆ ಬೇಕಾದ ಉಡುಗೊರೆ ಕೇಳುತ್ತಾಳೆ. ನನ್ನ ಮಗ ಭರತ ಅಯೋಧ್ಯೆಯ ರಾಜನಾಗಬೇಕು ಮತ್ತು ರಾಮ ವನವಾಸಕ್ಕೆ ಹೋಗಬೇಕು ಎಂದು ಕೇಳುತ್ತಾಳೆ.
ರಾಜಾ ದಶರಥ ಒಲ್ಲದ ಮನಸ್ಸಿನಿಂದಲೇ, ಶ್ರೀರಾಮನನ್ನು ಪತ್ನಿ ಸಮೇತ ವನವಾಸಕ್ಕೆ ಕಳುಹಿಸುತ್ತಾನೆ. ರಾಮನಿಲ್ಲದೇ ತಾನಿರುವುದಿಲ್ಲವೆಂದು ಲಕ್ಷ್ಮಣ ಕೂಡ ಅಣ್ಣ- ಅತ್ತಿಗೆಯೊಂದಿಗೆ ವನವಾಸಕ್ಕೆ ಹೋಗುತ್ತಾನೆ. ಆದರೆ ಭರತ, ಸಿಂಹಾಸನದ ಮೇಲೆ ಶ್ರೀರಾಮನ ಪಾದುಕೆಗಳನ್ನಿಟ್ಟು, ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸುತ್ತಾ, ಸಾಮಾನ್ಯ ಪ್ರಜೆಯಂತೆ ರಾಜ್ಯ ಭಾರ ಮಾಡುತ್ತಾನೆ.
ಇತ್ತ ಶ್ರೀರಾಮ 14 ವರ್ಷ ವನವಾಸ ಮಾಡುತ್ತ, ಮಾರೀಚಿ, ಸುಬಾಹು, ಖರ, ದೂಷಣ, ರಾವಣ ಕುಂಭಕರಣ ಸೇರಿ, ಹಲವು ರಕ್ಕಸರ ನಾಶ ಮಾಡುತ್ತಾನೆ. ಈ ಮೂಲಕ ಲೋಕಕಲ್ಯಾಣಕ್ಕಾಗಿ ಶ್ರೀರಾಮ ವನವಾಸ ಅನುಭವಿಸಿದನೆಂದು ಹೇಳಲಾಗುತ್ತದೆ.
ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..