Spiritual: ಈ ಕಥೆಯ ಮೊದಲ ಭಾಗದಲ್ಲಿ ನಾವು ಎತ್ತಿನ ಜನ್ಮ ಪಡೆದು, ವೇಶ್ಯೆಯಿಂದ ಪುಣ್ಯ ಪಡೆದು, ಮತ್ತೆ ಮನುಷ್ಯ ಜನ್ಮ ಪಡೆದ ಸುಶರ್ಮನ ಬಗ್ಗೆ ಹೇಳಿದ್ದೆವು. ಇದೀಗ, ಆ ವೇಶ್ಯೆಗೆ ಪುಣ್ಯ ಹೇಗೆ ಲಭಿಸಿತು ಅನ್ನುವ ಬಗ್ಗೆ ತಿಳಿದುಕೊಳ್ಳೋಣ.
ಸುಶರ್ಮ ವೇಶ್ಯೆಯ ಬಳಿ ಬರುತ್ತಾನೆ. ಆಕೆ ಇಷ್ಟು ಪುಣ್ಯ ಪ್ರಾಪ್ತಿ ಮಾಡಲು ಕಾರಣವೇನೆಂದು ಕೇಳುತ್ತಾನೆ. ಅದಕ್ಕೆ ವೇಶ್ಯೆ ಹೇಳುತ್ತಾಳೆ. ನನ್ನ ಮನೆಯಲ್ಲೊಂದು ಗಿಳಿ ಇದೆ. ಅದು ಪ್ರತಿದಿನ ಬೆಳಿಗ್ಗೆ ಏನನ್ನೋ ಪಠಿಸುತ್ತದೆ. ಆ ಪಠಣೆ ಕೇಳಿ, ನನ್ನ ಮನಸ್ಸು ಹಗುರವಾಗುತ್ತದೆ. ಅದನ್ನು ಕೇಳಿ ಕೇಳಿಯೇ ನನಗೆ ಪುಣ್ಯ ದೊರೆತಿದೆ. ಅದೇ ಪುಣ್ಯವನ್ನು ನಾನು ದಾನ ಮಾಡಿದ್ದೆ ಎನ್ನುತ್ತಾಳೆ. ಅದಕ್ಕೆ ಸುಶರ್ಮ ಆ ಗಿಳಿಯಲ್ಲಿ ಹೋಗಿ ನೀನು ಏನನ್ನು ಪಠಿಸುತ್ತಿದ್ದೆ ಎಂದು ಕೇಳುತ್ತಾನೆ.
ಅದಕ್ಕೆ ಆ ಗಿಳಿ, ನಾನು ಕಳೆದ ಜನ್ಮದಲ್ಲಿ ವಿದ್ವಾನ್ ಆಗಿದ್ದೆ. ಅಹಂಕಾರಿಯೂ ಆಗಿದ್ದೆ. ಬೇರೆ ವಿದ್ವಾಂಸರನ್ನು ಬೈಯುತ್ತಿದ್ದೆ. ಅವರ ವಿದ್ವತ್ತನ್ನು ಅವಮಾನಿಸುತ್ತಿದ್ದೆ. ಈ ಪಾಪಕ್ಕಾಗಿ, ನನ್ನ ಮೃತ್ಯುವಿನ ಬಳಿಕ, ನನಗೆ ಗಿಳಿಯ ಜನ್ಮ ಸಿಕ್ಕಿತು. ನಾನು ಜನ್ಮ ತಾಳುತ್ತಿದ್ದಂತೆ, ನನ್ನ ಅಪ್ಪ ಅಮ್ಮ ತೀರಿಹೋದರು. ಆದರೆ ಆ ವೇಳೆ ನಾನಿದ್ದ ಸ್ಥಳದಿಂದ ಕೆಲವು ಋಷಿಮುನಿಗಳು ಹೋಗುತ್ತಿದ್ದರು. ಅವರು ನನ್ನನ್ನು ತಮ್ಮೊಂದಿಗೆ ಆಶ್ರಮಕ್ಕೆ ತೆಗೆದುಕೊಂಡು ಹೋಗಿ, ಪಂಜರದೊಳಗೆ ಹಾಕಿ ಸಾಕತೊಡಗಿದರು.
ಅವರು ಪ್ರತಿದಿನ ಭಗವದ್ಗೀತೆಯನ್ನು ಓದುತ್ತಿದ್ದರು. ನಾನು ಅದನ್ನು ಕೇಳಿ ಕೇಳಿ, ಪಠಿಸುವುದನ್ನು ಕಲಿತೆ. ಆದರೆ ಓರ್ವ ಕಳ್ಳ ಬಂದು, ಒಂದು ರಾತ್ರಿ ನನ್ನನ್ನು ಕಳ್ಳತನ ಮಾಡಿ, ಈ ವೇಶ್ಯೆಗೆ ದುಡ್ಡಿಗೆ ಮಾರಾಟ ಮಾಡಿದ. ಈಕೆ ನನ್ನನ್ನು ಚೆನ್ನಾಗಿ ಸಾಕುತ್ತಿದ್ದಾಳೆ. ನಾನು ಪ್ರತಿದಿನ ಬೆಳಿಗ್ಗೆ ಭಗವದ್ಗೀತೆಯ ಶ್ಲೋಕವನ್ನು ಪಠಿಸುತ್ತೇನೆ. ಅದನ್ನು ಈಕೆ ಕೇಳುತ್ತಾಳೆ. ಮತ್ತು ಪಠಣನ ಪುಣ್ಯ ನನಗೆ ದೊರೆತರೆ, ಶ್ರವಣದ ಪುಣ್ಯ ಈಕೆಗೆ ದೊರೆಯುತ್ತದೆ ಎಂದು ಹೇಳುತ್ತದೆ. ಈ ರೀತಿ ಭಗವದ್ಗೀತೆಯ ಕಥೆ ಸಂಪೂರ್ಣವಾಗುತ್ತದೆ.
ಇದಾದ ಬಳಿಕ ಶ್ರೀವಿಷ್ಣು ಲಕ್ಷ್ಮೀಗೆ ಹೇಳುತ್ತಾನೆ. ನೋಡಿದೆಯಾ ದೇವಿ, ಈ ರೀತಿ ಭಗವದ್ಗೀತೆಯನ್ನು ಓದುವುದರಿಂದ ಮತ್ತು ಕೇಳುವುದರಿಂದ ಪುಣ್ಯ ಲಭ್ಯವಾಗುತ್ತದೆ. ಭಗವದ್ಗೀತೆ, ಅಷ್ಟು ಶಕ್ತಿಯುತವಾಗಿದೆ ಎನ್ನುತ್ತಾನೆ. ಆದ್ದರಿಂದಲೇ ಕೋರ್ಟಿನಲ್ಲಿ ಕಟಕಟೆಯಲ್ಲಿ ನಿಲ್ಲಿಸಿದಾಗ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿಸಿ, ಬಳಿಕ ಸತ್ಯ ಹೇಳಲು ಹೇಳುತ್ತಾರೆ.
ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?