Chanakya Neeti: ಚಾಣಕ್ಯರು ಹಲವು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಜೀವನದಲ್ಲಿ ಗೆಲ್ಲಬೇಕು ಅಂದ್ರೆ ನಾವು ಹೇಗೆ ಬಾಳಬೇಕು..? ಎಂಥ ಜಾಗದಲ್ಲಿ ಇರಬೇಕು ಮತ್ತು ಎಂಥ ಜಾಗದಲ್ಲಿ ನಾವು ವಾಸಿಸಬಾರದು..? ನಮ್ಮ ಆಯ್ಕೆ ಹೇಗಿರಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಯಾವ ಗುಣಗಳಿರುವ ಜನ ಒಬ್ಬಂಟಿಯಾಗಿರುತ್ತಾರೆ ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಸ್ವಾರ್ಥ: ಯಾರಿಗೆ ಅತೀಯಾದ ಸ್ವಾರ್ಥವಿರುತ್ತದೆಯೋ ಅವರು ಕೊನೆಗೆ ಒಬ್ಬಂಟಿಯಾಗುವರು. ಏಕೆಂದರೆ, ಬರೀ ತಮ್ಮ ಬಗ್ಗೆ ಮಾತ್ರ ಯೋಚಿಸುವವರ ಬಗ್ಗೆ ಯಾರೂ ಕಾಳಜಿ ಮಾಡುವುದಿಲ್ಲ. ನೀವು ಎದುರಿನವರನ್ನು ಪ್ರೀತಿಸಿದರೆ, ಕಾಳಜಿ ತೋರಿಸಿದರೆ, ಅವರ ಬಗ್ಗೆ ಯೋಚಿಸಿದರೆ ಮಾತ್ರ, ಎದುರಿನವರು ನಿಮ್ಮ ಬಗ್ಗೆ ಅದೇ ಪ್ರೀತಿ, ಕಾಳಜಿ, ಎಲ್ಲವನ್ನೂ ತೋರಿಸುತ್ತಾರೆ. ನೀವು ಬರೀ ನಿಮ್ಮ ಬಗ್ಗೆ ಯೋಚಿಸಿದರೆ, ಜನರೂ ನಿಮ್ಮನ್ನು ನಿರ್ಲಕ್ಷಿಸುತ್ತಾರೆ.
ಕೋಪ: ಯಾರಿಗೂ ಮಾತು ಮಾತಿಗೂ ಕೋಪ ಬರುತ್ತದೆಯೋ, ಯಾರ ಮಾತಿನಲ್ಲಿ ಕೊಂಕು, ಕಹಿ ನುಡಿ ಇರುತ್ತದೆಯೋ ಅಂಥವರು ಒಂಟಿಯಾಗುವುದು ಖಚಿತ. ಏಕೆಂದರೆ, ಯಾವ ಮನುಷ್ಯನೂ ಸುಮ್ಮ ಸುಮ್ಮನೆ ಎದುರಾಗುವ ಕೋಪ, ಕಹಿ ಮಾತು, ಕೊಂಕು ನುಡಿ ಸಹಿಸುವುದಿಲ್ಲ. ಹಾಗಾಗಿ ಈ ಗುಣವಿರುವವರೂ ಎಂದಿಗೂ ಒಬ್ಬಂಟಿಗಳೇ.
ತಾನೇ ಅತೀ ಉತ್ತಮನೆಂಬ ಭಾವ: ಕೆಲವರ ಬುದ್ಧಿಯನ್ನು ನೀವು ಗಮನಿಸಿರಬಹುದು. ಯಾರಾದರೂ ತಮ್ಮ ಅಭಿಪ್ರಾಯ ಹೇಳಿದರೆ, ಅದಕ್ಕೆ ವಿರುದ್ಧವಾಗಿ ಮಾತನಾಡಿ, ತಾವೇ ಉತ್ತಮರು ಅಂತಾ ಪ್ರತೀ ಸಲವೂ ಸಾಬೀತು ಮಾಡುತ್ತಾರೆ. ಈ ಬುದ್ಧಿ ಮುಂದುವರೆದಾಗ, ಆ ವ್ಯಕ್ತಯ ಜೊತೆ ಮಾತನಾಡಲು ಯಾರೂ ಇಚ್ಛಿಸುವುದಿಲ್ಲ.
ಎಲ್ಲರ ಮೇಲೂ ಅನುಮಾನ ಪಡುವುದು: ಯಾರಿಗೆ ಎಲ್ಲ ವಿಷಯದಲ್ಲೂ ಎಲ್ಲರ ಮೇಲೂ ಅನುಮಾನ ಪಡುವ ಗುಣವಿರುತ್ತದೆಯೋ, ಅಂಥವರ ಬಳಿ ಯಾರೂ ಸುಳಿಯುವುದಿಲ್ಲ.
ನಕಾರಾತ್ಮಕ ಯೋಚನೆ: ಯಾರು ಸದಾಕಾಲ ಇನ್ನೊಬ್ಬರ ಬಗ್ಗೆ ನಕಾರಾತ್ಮಕವಾಗಿ ಯೋಚಿಸುತ್ತಾರೋ, ನಕಾರಾತ್ಮಕವಾಗಿ ಮಾತನಾಡುತ್ತಾರೋ ಅಂಥವರು ಒಬ್ಬಂಟಿಗಳಾಗುತ್ತಾರೆ. ಏಕೆಂದರೆ, ಅವರ ಕರ್ಮಗಳು ಅವರಿಗೇ ತಿರುಗು ಬಾಣವಾಗುತ್ತದೆ.




