Spiritual: ಭಾರತದಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ವೈಷ್ಣೋದೇವಿ ಮಂದಿರವೂ ಒಂದು. ಭಾರತವಷ್ಟೇ ಅಲ್ಲದೇ, ವಿದೇಶಗಳಿಂದಲೂ ಜನ ಈ ದೇವಸ್ಥಾನ ಮತ್ತು ಪ್ರವಾಸಿ ತಾಣಕ್ಕೆ ಚಾರಣಕ್ಕೆಂದು ಬರುತ್ತಾರೆ. ಇಂದು ನಾವು ಈ ಸ್ಥಳದಲ್ಲಿ ವೈಷ್ಣೋದೇವಿ ಬಂದು ನೆಲೆಸಿದ್ದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ..
ಹಿಮಾಲಯದ ತ್ರಿಕೋಟಾ ಪರ್ವತದಲ್ಲಿ ವೈಷ್ಣೋದೇವಿ ಮಂದಿರವಿದೆ. ವೈಷ್ಣೋದೇವಿಗೆ ಸಂಬಂಧಿಸದಂತೆ ಹಲವು ಕಥೆಗಳಿದೆ. ಅದರಲ್ಲಿ ಒಂದು ಕಥೆಯನ್ನು ಇಂದು ನಾವು ನಿಮಗೆ ಹೇಳುತ್ತೇವೆ. ಲೋಕ ಕಲ್ಯಾಣಕ್ಕಾಗಿ ಸರಸ್ವತಿ, ಲಕ್ಷ್ಮೀ, ದುರ್ಗೆ ಸೇರಿ ತಮ್ಮ ಅಂಶವನ್ನು ಒಟ್ಟುಗೂಡಿಸಿ, ಒಂದು ಹೆಣ್ಣನ್ನು ಸೃಷ್ಟಿಸುತ್ತಾರೆ. ಅವಳು ರಾಮೇಶ್ವರಂನಲ್ಲಿ ರತ್ನಾಕರನೆಂಬ ಪಂಡಿತನ ಮಗಳಾಗಿ ಜನಿಸುತ್ತಾಳೆ.
ಆಕೆ ವಿಷ್ಣುವಿನ ಭಕ್ತೆಯಾದ ಕಾರಣ, ಆಕೆಗೆ ವೈಷ್ಣವಿ ಎಂಬ ಹೆಸರನ್ನಿಡುತ್ತಾರೆ. ಈಕೆ 9 ವರ್ಷದವಳಾದಾಗ, ತಾನು ವಿಷ್ಣುವಿನ ಅವತಾರವಾದ ಶ್ರೀರಾಮನನ್ನು ವರಿಸಬೇಕೆಂಬ ಕಾರಣಕ್ಕೆ, ಕಡಲ ತೀರಕ್ಕೆ ಹೋಗಿ, ರಾಮನಿಗಾಗಿ ಕಠಿಣ ತಪಸ್ಸು ಮಾಡುತ್ತಾಳೆ. ಸೀತೆಯನ್ನು ಹುಡುಕುತ್ತ ಶ್ರೀರಾಮ ಆ ಕಡಲ ತೀರಕ್ಕೆ ಬಂದಾಗ, ಅವನ ಹೆಸರನ್ನು ಸ್ಮರಿಸುತ್ತ, ಹುಡುಗಿಯೊಬ್ಬಳು ಧ್ಯಾನ ಮಾಡುವುದನ್ನು ಗಮನಿಸುತ್ತಾನೆ.
ಆಕೆಯಲ್ಲಿ ಹೋಗಿ, ಆಕೆಯ ಪ್ರಾರ್ಥನೆಗೆ ಕಾರಣವೇನು ಎಂದು ಕೇಳಿದಾಗ, ನಿಮ್ಮನ್ನು ವರಿಸುವ ಆಸೆ ಹೊಂದಿದ್ದೇನೆಂದು ಹೇಳುತ್ತಾಳೆ. ಆಗ ಶ್ರೀರಾಮ, ನಾನು ಸೀತಾಮಾತೆಯನ್ನು ವಿವಾಹವಾಗಿದ್ದೇನೆ. ಆಕೆಯೊಂದಿಗೆ ಈ ಜನ್ಮ ಕಳೆದು, ಕಲಿಯುಗದಲ್ಲಿ ಕಲ್ಕಿ ಅವತಾರದಲ್ಲಿ ಬಂದು ನಿನ್ನನ್ನು ವರಿಸುತ್ತೇನೆ. ಅಲ್ಲಿಯವರೆಗೂ ಹಿಮಾಲಯ ಪರ್ವತದ ತ್ರಿಕೋಟಾದಲ್ಲಿ ನೀನು ನೆಲೆ ನಿಂತು, ಭಕ್ತರನ್ನು ಉದ್ಧರಿಸು ಎಂದು ಹೇಳುತ್ತಾನೆ.
ಹಾಗಾಗಾ ವೈಷ್ಣವಿ ದೇವಿ ತ್ರಿಕೋಟಾ ಪರ್ವತದಲ್ಲಿ ನೆಲೆನಿಂತು, ಭಕ್ತರ ರಕ್ಷಣೆ, ಲೋಕದ ಉದ್ಧಾರ ಮಾಡುತ್ತಿದ್ದಾಳೆ. ನವರಾತ್ರಿಯಲ್ಲಿ ರಾಮಾಯಣ ಪಾರಾಯಣ ಮಾಡುವುದರ ಮೂಲಕ, ಇಲ್ಲಿ ನವರಾತ್ರಿ ಆಚರಿಸಲಾಗುತ್ತದೆ.