Spiritual: ಗಣಪತಿಗೆ ಪ್ರಥಮ ಪೂಜೆಯ ವರ ನೀಡಿದವನು ಶಿವ. ಆದರೆ ಶಿವ ಅದನ್ನು ಮರೆತಿದ್ದರಿಂದ, ಅವನಿಗೂ ಹಲವು ಅಡೆತಡೆಗಳು ಉಂಟಾದವು. ಹಾಗಾದ್ರೆ ಶಿವನಿಗೆ ಯಾವಾಗ, ಏನು ಅಡೆತಡೆ ಉಂಟಾಯಿತು. ಅದನ್ನು ಗಣೇಶ ಹೇಗೆ ಸರಿಪಡಿಸಿದ ಅನ್ನೋ ಬಗ್ಗೆ ಕಥೆ ತಿಳಿಯೋಣ ಬನ್ನಿ..
ಪಾರ್ವತಿ ದೇವಿ ಓರ್ವ ಬಾಲಕನನ್ನು ಸೃಷ್ಟಿಸಿ, ತಾನು ಸ್ನಾನಗೃಹದಿಂದ ಬರುವವರೆಗೂ ಬಾಗಿಲು ಕಾಯಲು ಹೇಳುತ್ತಾಳೆ. ಆಕೆ ಆಜ್ಞೆಯನ್ನು ಆ ಬಾಲಕ ಪಾಲಿಸುವಾಗ, ಶಿವ ಸ್ನಾನಗೃಹಕ್ಕೆ ಹೋಗಲು ಬರುತ್ತಾನೆ. ಆಗ ಶಿವ ಮತ್ತು ಆ ಬಾಲಕನ ನಡುವೆ ವಾಗ್ವಾದ ನಡೆದು, ಇಬ್ಬರ ಮಧ್ಯೆ ಯುದ್ಧವಾಗುತ್ತದೆ. ಶಿವ ಬಾಲಕನ ರುಂಡ ಕಡಿದು ಹಾಕುತ್ತಾನೆ. ಆಗ ಪಾರ್ವತಿ ಕೋಪದಿಂದ, ತನ್ನ ಮಗನನ್ನು ಪುನಃ ಮರಳಿಸಿಕೊಡಿ ಎಂದು ಶಿವನಲ್ಲಿ ಹೇಳುತ್ತಾಳೆ.
ಪಾರ್ವತಿಯ ಕೋಪ, ದುಃಖ ಕಾಣಲಾಗದ ಶಿವ, ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ ಆನೆಯ ಶಿರ ಕಡಿದು ತನ್ನಿ ಎಂದು ಹೇಳುತ್ತಾನೆ. ಬಳಿಕ ಬಾಲಕನಿಗೆ ಆನೆಯ ಶಿರವನ್ನು ಕೂರಿಸಲಾಗುತ್ತದೆ. ಅವನೇ ಗಣೇಶ. ಗಣೇಶನಿಗೆ ದೇವಾನು ದೇವತೆಗಳಿಂದ ಹಲವು ಆಯುಧಗಳು ಸಿಗುತ್ತದೆ. ಮತ್ತು ಯಾರು ಶುಭಕಾರ್ಯಕ್ಕೂ ಮುನ್ನ ಗಣೇಶನನ್ನು ಪೂಜಿಸುತ್ತಾನೋ, ಅಂಥ ಶುಭಕಾರ್ಯಗಳು ಸುಲಭವಾಗಿ, ಯಾವುದೇ ವಿಘ್ನವಿಲ್ಲದೇ ನೆರವೇರುತ್ತದೆ ಎಂದು ಶಿವ ವರ ಕೊಡುತ್ತಾನೆ.
ಆದರೆ ಶಿವನೇ ಈ ಮಾತನ್ನು ಮರೆತು ಬಿಡುತ್ತಾನೆ. ಲೋಕದಲ್ಲಿ ಎಲ್ಲರಿಗೂ ಉಪಟಳ ನೀಡುತ್ತಿದ್ದ ರಾಕ್ಷಸರ ವಿರುದ್ಧ ಯುದ್ಧ ಮಾಡಲು ಶಿವ, ಯುದ್ಧಕ್ಕೆ ಹೋಗಲು ಸನ್ನದ್ಧನಾಗುತ್ತಾನೆ. ಆದರೆ ಗಣೇಶನ ಪೂಜೆ ಮಾಡುವುದನ್ನೇ ಮರೆಯುತ್ತಾನೆ. ಶಿವ ತನ್ನ ಗಣಗಳೊಂದಿಗೆ ದುಷ್ಟಶಕ್ತಿಯ ವಿರುದ್ಧ ಯುದ್ಧಕ್ಕೆ ಹೊರಟ. ಯುದ್ಧಭೂಮಿಗೆ ಹೋಗುವ ಮುನ್ನವೇ ಹಲವು ವಿಘ್ನಗಳು ಎದುರಾದವು.
ಆಗ ಶಿವನಿಗೆ ಗಣಪತಿಯ ಪೂಜೆ ಮಾಡಿ ಬರುವುದನ್ನೇ ಮರೆತಿದ್ದೇನೆ ಎಂಬುದು ನೆನಪಾಯಿತು. ಆಗ ಶಿವ ತನ್ನ ಗಣಗಳೊಂದಿಗೆ ಸೇರಿ ಗಣಪನ ಬಳಿ ಮರಳಿ ಹೋಗಿ, ಗಣೇಶನ ಪೂಜೆ ಮಾಡಿ, ಮತ್ತೊಮ್ಮೆ ಯುದ್ಧಕ್ಕೆ ಹೊರಟನು. ಆಗ ಶಿವನಿಗೆ ರಾಕ್ಷಸರ ವಿರುದ್ಧ ಯುದ್ಧದಲ್ಲಿ ಜಯ ಸಿಕ್ಕಿತು.