ಸಕಲ ವಿದ್ಯಾ ಪರಿಣಿತನೂ, ಶಿವಭಕ್ತನೂ, ರಾಕ್ಷಸ ರಾಜನೂ ಆದ ರಾವಣ, ಅಸತ್ಯ, ಅಧರ್ಮದ ದಾರಿಯಲ್ಲಿ ನಡೆದವನಾಗಿದ್ದಾನೆ. ಆದ್ರೆ ಉತ್ತಮ ಕುಲದಲ್ಲಿ ಜನಿಸಿದರೂ, ಯಾಕೆ ರಾವಣ ಅನಾಚಾರಿ ಮತ್ತು ಅಧರ್ಮಿಯಾದ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ.
ಮಾಲ್ಯವಾನ, ಮಾಲಿ, ಮತ್ತು ಸುಮಾಲಿ ಎಂಬ ಮೂವರು ರಾಕ್ಷಸರಿದ್ದರು. ಮೂವರು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಬಲಶಾಲಿಯಾಗುವ ವರ ಪಡೆದರು. ದೇವತೆಗಳಿಗೆ ಉಪಟಳ ಕೊಡಲು ಪ್ರಾರಂಭಿಸಿದರು. ಆಗ ದೇವತೆಗಳು ವಿಷ್ಣುವಿನ ಬಳಿ ಇದಕ್ಕೆ ಪರಿಹಾರ ಕೇಳಲು ಹೋದರು. ವಿಷ್ಣು ಮಾಲಿ, ಸುಮಾಲಿ ಮತ್ತು ಮಾಲ್ಯವಾನನ ಜೊತೆ ಯುದ್ಧ ಮಾಡಿದ. ಈ ಯುದ್ಧದಲ್ಲಿ ಮೌಲ್ಯವಾನ ಸಾವನ್ನಪ್ಪಿದ. ಮಾಲಿ ಸುಮಾಲಿ ಪಾತಾಳದಿಂದ ಓಡಿ ಹೋದರು.
ಕೆಲ ದಿನಗಳ ಬಳಿಕ ಸುಮಾಲಿ, ಭೂಲೋಕದಲ್ಲಿ ತಿರುಗಾಡಲು ಬಂದ. ಆದರೆ ಯಾರಾದರೂ ದೇವತೆಗಳು ಅವನನ್ನು ನೋಡಿಬಿಟ್ಟರೆ, ಕೊಂದು ಬಿಟ್ಟರೆ ಎಂಬ ಭಯ ಅವನಿಗೆ ಕಾಡುತ್ತಿತ್ತು. ಹಾಗಾಗಿ ಮತ್ತೆ ಕೆಲ ಸಮಯದಲ್ಲೇ ಪಾತಾಳಕ್ಕೆ ಹೋದ. ನಂತರ ಹೇಗಾದರೂ ಮಾಡಿ ದೇವತೆಗಳು ತಮ್ಮ ಸುದ್ದಿಗೆ ಬಾರದಂತೆ ಮಾಡಲು ಏನು ಮಾಡಬಹುದೆಂದು ಯೋಚಿಸತೊಡಗಿದ.
ಆಗ ಅವನಿಗೆ ಕುಬೇರನ ನೆನಪಾಗುತ್ತದೆ. ಕುಬೇರನ ತಂದೆ ಋಷಿ ವಿಶೃವನೊಂದಿಗೆ ತನ್ನ ಮಗಳ ಮದುವೆ ಮಾಡಿದರೆ, ದೇವತೆಯಂಥ ತೇಜಸ್ವಿ ಮಕ್ಕಳನ್ನ ಪಡೆಯಬಹುದು. ಆಗ ದೇವತೆಗಳೂ ತನ್ನೊಂದಿಗೆ ಯುದ್ಧ ಮಾಡಲು ಹೆದರುವರೆಂದು ಯೋಚಿಸಿದ. ಅಂತೆಯೇ ಮಗಳಾದ ಕೈಕಸಿಗೆ ಈ ಬಗ್ಗೆ ತಿಳಿಸಿದ. ಆಕೆ ಋಷಿಯ ಬಳಿ ಹೋಗಿ, ವಿವಾಹಕ್ಕಾಗಿ ವಿನಂತಿಸಿದಳು. ಅಲ್ಲದೇ ತನಗೆ ದೇವತೆಗಳಂಥ ತೇಜಸ್ವಿ ಮಕ್ಕಳನ್ನ ಕರುಣಿಸಿ ಎಂದು ಕೇಳಿಕೊಂಡಳು.
ಆಗ ಋಷಿಗಳು, ನಿನ್ನ ಮನವಿಯನ್ನು ನಾನು ಸತ್ಕರಿಸುತ್ತೇನೆ. ಆದರೆ ನೀನು ಉತ್ತಮ ಸಮಯದಲ್ಲಿ ಬರದ ಕಾರಣ, ನಿನಗೆ ದೇವತೆಯಂಥ ಮಗ ಜನಿಸಲು ಸಾಧ್ಯವಿಲ್ಲ. ನಿನಗೆ ಮೂರು ಪುತ್ರರನ್ನು ಕರುಣಿಸುತ್ತೇನೆ. ಅದರಲ್ಲಿ ಇಬ್ಬರು ಪುತ್ರರು ರಾಕ್ಷಸೀಯ ಪ್ರವೃತ್ತಿಯವರು ಮತ್ತು ಓರ್ವ ಪುತ್ರ ಉತ್ತಮ ಗುಣ ಉಳ್ಳವನಾಗಿರುತ್ತಾನೆ. ಮತ್ತು ಅವರು ಸಕಲ ವಿದ್ಯಾ ಪಾರಂಗತರು, ಪಂಡಿತರಾಗಿರುತ್ತಾರೆ ಎನ್ನುತ್ತಾರೆ. ಹಾಗಾಗಿ ಕೈಕಸಿ ಮತ್ತು ಋಷಿಗಳಿಗೆ ರಾವಣ ಮತ್ತು ಕುಂಭಕರಣನಂಥ ರಾಕ್ಷಸೀಯ ಪ್ರವೃತ್ತಿಯ ಪುತ್ರರು ಮತ್ತು ವಿಭೀಷಣನಂಥ ಉತ್ತಮ ಗುಣವುಳ್ಳ ಪುತ್ರರು ಜನಿಸುತ್ತಾರೆ.