Chanakya Neeti: ಮನುಷ್ಯ ದುಡಿಯೋದೇ ಖರ್ಚು ಮಾಡೋಕ್ಕೆ. ಹಾಗಂತ ಸುಮ್ಮ ಸುಮ್ಮನೆ ಅವಶ್ಯಕತೆ ಇಲ್ಲದಕ್ಕೆಲ್ಲಾ ಖರ್ಚು ಮಾಡೋದಲ್ಲ. ಬದಲಾಗಿ, ದಿನಸಿ, ಮನೆ ಬಾಡಿಗೆ, ವಸ್ತ್ರ ಇತ್ಯಾದಿ ಅವಶ್ಯಕ ವಸ್ತುಗಳಿಗೆ ಮಾತ್ರ ಖರ್ಚು ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಹಲವರು ಇದಕ್ಕೆ ಬಿಟ್ಟು, ಬೇಡದ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ.
ಕೈಗೆ ಟ್ರಾಲಿ ಹಿಡಿದರೆ, ಸಿಕ್ಕ ಸಿಕ್ಕಿದ್ದನ್ನೆಲ್ಲಾ ತುಂಬಿಸಿ ತಂದುಬಿಡುತ್ತಾರೆ. ಬಳಿಕ ನಾನು ಸುಮ್ಮನೆ ಹೆಚ್ಚು ಖರ್ಚು ಮಾಡಿದೆ ಎಂದು ಪಶ್ಚಾತಾಪ ಪಡುತ್ತಾರೆ. ಅಂಥವರಿಗಾಗಿ ಚಾಣಕ್ಯರು ಕೆಲ ನಿಯಮಗಳನ್ನು ಹೇಳಿದ್ದಾರೆ. 5 ವಸ್ತುಗಳಿಗಾಗಿ ಎಂದಿಗೂ ಹೆಚ್ಚು ಖರ್ಚು ಮಾಡಬೇಡಿ ಎಂದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಪ್ರಯಾಣ ಮತ್ತು ಮನೋರಂಜನೆ: ಮನುಷ್ಯನಿಗೆ ಮನರಂಜನೆ ಮತ್ತು ಪ್ರಯಾಣ ಎರಡೂ ಮುಖ್ಯ. ಮನೆಯಲ್ಲೇ ಕುಳಿತರೆ, ಮನುಷ್ಯ ಹುಚ್ಚನಂತಾಾಗುತ್ತಾನೆ. ಹಾಗಾಗಿ ಮನುಷ್ಯನಿಗೆ ಆಗಾಗ ಮನೋರಂಜನೆ ಬೇಕು. ಆತ ಊರೂರು ಸುತ್ತಿ ಹಲವು ವಿಷಯಗಳನ್ನು ಅರಿಯಬೇಕು.
ಆದರೆ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಎಂದಿಗೂ ಮನೋರಂಜನೆ ಮತ್ತು ಪ್ರಯಾಣಕ್ಕೆ ಆಗಬಾರದು. ಬರುವ 10 ಸಾವಿರ ಸಂಬಳದಲ್ಲಿ ಆಹಾರ, ಬಾಡಿಗೆ ಖರ್ಚು ಬಿಟ್ಟು 7 ಸಾವಿರ ಉಳಿದರೆ, ನಿಮ್ಮ ಮನೋರಂಜನೆ ಮತ್ತು ಪ್ರಯಾಣದ ಖರ್ಚೇ 8 ಸಾವಿರವಿದ್ದಲ್ಲಿ, ಅದು ವ್ಯರ್ಥ ಖರ್ಚಾಗುತ್ತದೆ.
ಹಾಗಾಗಿ ನಿಮ್ಮಆದಾಯ ಮೀರದಂತೆ ನೀವು ಪ್ರಯಾಣ ಮತ್ತು ಮನೋರಂಜನೆಗೆ ಖರ್ಚು ಮಾಡಬೇಕು ಅಂತಾರೆ ಚಾಣಕ್ಯರು.
ಬೀದಿ ಬದಿ ಆಹಾರ ಸೇವನೆ: ಮನೆಯ ಆಹಾರಕ್ಕಿಂತ ಉತ್ತಮ, ಆರೋಗ್ಯಕರ ಆಹಾರ ಬೇರಿಲ್ಲ. ಹಾಗಾಗಿ ಮನೆಯಲ್ಲೇ ಆಹಾರ ತಯಾರಿಸಿ, ಸೇವಿಸಿ, ಆರೋಗ್ಯವಾಗಿರುವುದು ಉತ್ತಮ. ಬೀದಿ ಬದಿ ಆಹಾರ ಸೇವನೆ ಅಪರೂಪಕ್ಕಿದ್ದರೆ ಉತ್ತಮ. ಅದನ್ನು ಬಿಟ್ಟು ವಾರಕ್ಕೆ ನಾಲ್ಕು ಬಾರಿ ಬೀದಿ ತಿಂಡಿಯೇ ತಿಂದರೆ, ಜೇಬು ಖಾಲಿಯಾಗುತ್ತದೆ. ಆರೋಗ್ಯವೂ ಕೆಡುತ್ತದೆ.
ಸಣ್ಣ ಸಣ್ಣ ಖರ್ಚು: ನಾವು ಪ್ರತಿದಿನ ಮಾಡುವ ಸಣ್ಣ ಸಣ್ಣ ಖರ್ಚಿನ ಬಗ್ಗೆ ನಮಗೆ ಗಮನವೇ ಇರುವುದಿಲ್ಲ. ಪ್ರತಿದಿನ ಆಫೀಸಿಗೆ ಹೋಗಿ, ಅಲ್ಲಿ ಬ್ರೇಕ್ ನೆಪದಲ್ಲಿ ನಾಲ್ಕೈದು ಸಲ ಚಹಾ, ಕಾಫಿ, ಸಿಗರೇಟ್ ಸೇವನೆ ಮಾಡಿದ್ರೆ, ಅಲ್ಲೇ 200ರಿಂದ 300 ರೂಪಾಯಿ ಖಾಲಿಯಾಗುತ್ತದೆ.
ದಿನಕ್ಕೆ ಇಷ್ಟು ಖರ್ಚಾದರೆ, ತಿಂಗಳಿಗೆ 7 ಸಾವಿರ ಖರ್ಚು. ವರ್ಷಕ್ಕೆ 80 ಸಾಾವಿರ ಅನ್ನಬಹುದು. ಇಂಥ ಸಂದರ್ಭದಲ್ಲಿ ನಮಗೆ ಇದೆಲ್ಲ ಸಣ್ಣ ಖರ್ಚು ಎನ್ನಿಸಿದರೆ, ಅದನ್ನು ವರ್ಷಕ್ಕೆ ಎಷ್ಟು ಎಂದು ಲೆಕ್ಕ ಹಾಕಿದಾಗ, ಸಣ್ಣ ಖರ್ಚೆ ಎಷ್ಟು ತೀವ್ರ ಎಂದು ತಿಳಿಯುತ್ತದೆ.
ಹಾಗಂತ ಹಸಿವಾದಾಗ ಚಹಾ ಕಾಫಿ ಕುಡಿಯಬಾರದಾ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಚಹಾ ಕಾಫಿ ಹೆಚ್ಚೆಂದರೆ, ದಿನಕ್ಕೆ 2ರಿಂದ 3 ಸಲ ಕುಡಿಯಬಹುದು. ಆದರೆ ಚಟದಂತೆ ಗಂಟೆಗೆ 1 ಬಾರಿ ಕುಡಿದರೆ, ದುಡ್ಡು ಖರ್ಚೂ ಆರೋಗ್ಯವೂ ಹಾಳು.
ಶೋಕಿಯ ಜೀವನಕ್ಕೆ ಖರ್ಚು: ಇನ್ನು ಅವಶ್ಯಕತೆ ಇಲ್ಲದಿದ್ದರೂ ಕೆಲವರು ಶೋಕಿಗಾಗಿ ಖರ್ಚು ಮಾಡುತ್ತಾರೆ. ಇತರರಿಗೆ ಚೆಂದಗಾಣಬೇಕು ಎಂದು ಹೆಚ್ಚು ಖರ್ಚು ಮಾಡಿ ಸೌಂದರ್ಯವರ್ಥಕ ಖರೀದಿಸುವುದು. ಕಾರ್ ಖರೀದಿ, ಆಡಂಬರದ ಪೂಜೆ ಇದೆಲ್ಲವೂ ಅನವಶ್ಯಕ ವೆಚ್ಚ. ಇತರರನ್ನು ಮೆಚ್ಚಿಸಲು ಹೋಗಿ, ನೀವು ಸಾಲದ ಶೂಲಕ್ಕೆ ಸಿಲುಕದಂತೆ ನೋಡಿ.




