Spiritual Story: ಹಿಂದೂ ಧರ್ಮದಲ್ಲಿ ಶುಭಕಾರ್ಯಗಳಿದ್ದಾಗ, ಹಬ್ಬ ಹರಿದಿನಗಳಲ್ಲಿ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಪದ್ಧತಿ. ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೇ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸಲು ಕಾರಣವಾಗುತ್ತದೆ. ಹಾಗಾದ್ರೆ ಶುಭಕಾರ್ಯವಿದ್ದಾಗ ಮನೆಗೆ ಮಾವಿನ ತೋರಣ ಕಟ್ಟಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮನೆ ಅಥವಾ ಕಚೇರಿಗಳಲ್ಲಿ, ಅಂಗಡಿಗಳಲ್ಲಿ ಶುಭಕಾರ್ಯವಿದ್ದಾಗ ಮಾವಿನ ತೋರಣ ಕಟ್ಟಲಾಗುತ್ತದೆ. ಏಕೆಂದರೆ, ಯಾವುದೇ ಶುಭಕಾರ್ಯವು ಮಾವಿನ ತೋರಣವಿಲ್ಲದೇ, ಅಪೂರ್ಣವೆನ್ನಿಸಿಕೊಳ್ಳುತ್ತದೆ. ಮಾವಿನ ತೋರಣವನ್ನು ಮನೆಬಾಗಿಲಿಗೆ ಕಟ್ಟಿದಾಗಲೇ, ಆ ಮನೆಗೊಂದು ಕಳೆ, ಪೂಜೆಗೊಂದು ಶೋಭೆ. ಕಾರ್ಯಕ್ರಮ ಪರಿಪೂರ್ಣ. ಇದನ್ನು ಕಟ್ಟಲು ಮುಖ್ಯವಾದ ಕಾರಣ ಅಂದ್ರೆ, ಶುಭಕಾರ್ಯದ ವೇಳೆ ಯಾವುದೇ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸದೇ, ಕಾರ್ಯಕ್ರಮ ಶುಭವಾಗಿ, ಸಾಂಘವಾಗಿ ನೆರವೇರಬೇಕೆಂದು. ಏಕೆಂದರೆ, ಮಾವಿನ ಎಲೆ ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಿ, ಸಕಾರಾತ್ಮಕ ಶಕ್ತಿಯನ್ನು ಪಸರಿಸಲು ಸಹಕರಿಸುತ್ತದೆ.
ಅಲ್ಲದೇ ನೀವು ಎಲ್ಲ ಹಬ್ಬ ಹರಿದಿನಗಳಲ್ಲಿ, ಎಲ್ಲ ಕಾರ್ಯಕ್ರಮಗಳಲ್ಲೂ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿದರೆ, ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ, ಆರೋಗ್ಯ, ನೆಮ್ಮದಿ, ಸುಖ, ಸಂತೋಷ ಎಲ್ಲವೂ ಅಭಿವೃದ್ಧಿಯಾಗುತ್ತದೆ. ಅಲ್ಲದೇ ಪೂಜಾ ಫಲ ಕೂಡ ಸಂಪೂರ್ಣವಾಗಿ ದೊರಕುತ್ತದೆ. ಆದರೆ ಮಾವಿನ ತೋರಣ ಒಣಗಿದ ಬಳಿಕ, ಆ ತೋರಣವನ್ನು ತೆಗೆದು ಹಾಕುವುದು ಉತ್ತಮ.




