Spiritual Story: ರಾಮನ ಪರಮ ಭಕ್ತೆ ಯಾರು ಎಂದು ಕೇಳಿದರೆ, ಅದಕ್ಕೆ ಸಿಗುವ ಉತ್ತರ ಶಬರಿ. ಹಾಗಾಗಿ ಇಂದು ನಾವು ಶಬರಿ ಯಾರು, ಆಕೆ ಏಕೆ ರಾಮನಿಗಾಗಿ ಕಾದಳು ಎಂಬ ಬಗ್ಗೆ ಕಥೆ ಹೇಳಲಿದ್ದೇವೆ.
ಶಬರಿ ಕಾಡುಜನಾಂಗದವಳಾಗಿದ್ದು, ಆಕೆ ತನ್ನ ತಂದೆ ತಾಯಿ ಸಹೋದರಿಯೊಂದಿಗೆ ಕಾಡಿನಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಜ್ಯೋತಿಷಿಯೊಬ್ಬರು ಬಂದು, ಶಬರಿ ಸನ್ಯಾಸಿಯಾಗಲಿದ್ದಾಳೆ ಎಂದು ಭವಿಷ್ಯ ನುಡಿದರು. ಇದನ್ನು ಕೇಳಿದ ಆಕೆಯ ತಂದೆ ತಾಯಿ, ಈಗಲೇ ಆಕೆಯ ಮದುವೆ ಮಾಡಿಸಬೇಕು ಎಂದು ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡು, ಗಂಡು ಹುಡುಕಿದರು.
ಅಲ್ಲದೇ, ಮನೆಯ ಬಳಿ ಹಲವು ಪ್ರಾಣಿಗಳನ್ನು ತಂದು ಕಟ್ಟಿದ್ದರು. ಆಟವಾಡಿ ಸಂಜೆ ಮನೆಗೆ ಬಂದ ಶಬರಿ, ತನ್ನ ಮನೆಯ ಬಳಿ ರಾಶಿ ರಾಶಿ ಪ್ರಾಣಿಗಳನ್ನು ಕಂಡು ಖುಷಿ ಪಟ್ಟಳು. ಅವುಗಳ ಜೊತೆ ಸಾಕಷ್ಟು ಹೊತ್ತು ಆಟವಾಡಿದಳು. ಬಳಿಕ, ತಾಯಿಯ ಬಳಿ ಹೋಗಿ, ನಮ್ಮ ಮನೆಗೆ ಇಷ್ಟೆಲ್ಲ ಪ್ರಾಣಿಗಳನ್ನು ತಂದು ಏಕೆ ಕಟ್ಟಿದ್ದೀರಿ ಎಂದು ಕೇಳಿದಳು.
ಆಗ ಶಬರಿಯ ತಾಯಿ, ನಾವು ನಿನ್ನ ಮದುವೆ ಮಾಡುತ್ತಿದ್ದೇವೆ. ಆ ದಿನ ಈ ಪ್ರಾಣಿಗಳನ್ನು ಬಲಿ ಕೊಟ್ಟು, ಬಂದವರಿಗೆ ಭಕ್ಷ್ಯ ಭೋಜನ ಉಣಬಡಿಸಲಿದ್ದೇವೆ ಎಂದು ಹೇಳಿತ್ತಾರೆ. ಆಗ ಶಬರಿ ತಾನೇ ಮನೆಯಲ್ಲಿ ಇಲ್ಲದಿದ್ದರೆ, ಈ ಮದುವೆಯೇ ನಡೆಯುವುದಿಲ್ಲ. ಆಗ ಈ ಪ್ರಾಣಿಗಳು ಸಾಯುವುದಿಲ್ಲವೆಂದು ತಿಳಿದು, ಮನೆ ಬಿಟ್ಟು ಋಷ್ಯಪರ್ವತದ ಬಳಿ ಇರುವ ಸನ್ಯಾಸಿಗಳ ವಾಸಸ್ಥಾನಕ್ಕೆ ಹೋದಳು.
ಅಲ್ಲಿ ಅವಳೂ ಸನ್ಯಾಸಿಯಾಗಿ ಇದ್ದಳು. ಆದರೆ ಆಕೆ ಕೀಳು ಜಾತಿಯವಳು ಎಂದು ಅಲ್ಲಿನ ಋಷಿಗಳು ಆಕೆಯನ್ನು ಅಲ್ಲಿಂದ ಓಡಿಸಿದರು. ಆಕೆ ಮತಂಗ ಮುನಿಗಳ ಬಳಿ ಆಶ್ರಯ ಕೇಳಿ ಹೋದಳು. ಮತಂಗ ಮುನಿಗಳು ಆಕೆಗೆ ಆಶ್ರಯ ಕೊಟ್ಟರು. ಆಕೆ ಮತಂಗ ಮುನಿಗಳ ಸೇವೆ ಮಾಡಿಕೊಂಡು ಇದ್ದಳು. ಮತಂಗ ಮುನಿಗಳಿಗೆ ವಯಸ್ಸಾಗುತ್ತಾ ಬಂತು.
ಒಂದು ದಿನ ಮತಂಗ ಮುನಿಗಳು ತಮ್ಮ ದೇಹತ್ಯಾಗ ಮಾಡುವ ನಿರ್ಧಾರ ಮಾಡಿ, ಆಶ್ರಮ ಬಿಟ್ಟು ಹೊರಟರು. ಶಬರಿ ಕೂಡ, ನನಗೆ ಇಷ್ಟು ದಿನ ಅನ್ನ ನೀರು ಕೊಟ್ಟು, ಮಗಳಂತೆ ಸಾಕಿದ್ದೀರಿ. ನೀವು ನನ್ನನ್ನು ಬಿಟ್ಟು ಹೋದರೆ, ನಾನೊಬ್ಬಳೇ ಹೇಗಿರಲಿ. ನಾನೂ ನಿಮ್ಮೊಂದಿಗೆ ದೇಹ ತ್ಯಾಗ ಮಾಡುತ್ತೇನೆ ಎಂದು ಹೇಳುತ್ತಾಳೆ.
ಅದಕ್ಕೆ ಮುನಿಗಳು, ನಿನ್ನನ್ನು ಆ ರಾಮ ಕಾಪಾಡುತ್ತಾನೆ ಎಂದು ಹೇಳುತ್ತಾರೆ. ಅದಕ್ಕೆ ಶಬರಿ, ರಾಮ ಎಂದರೆ ಯಾರು..? ಅವರನ್ನು ನಾನು ಹೇಗೆ ಹುಡುಕಲಿ ಎಂದು ಕೇಳುತ್ತಾಳೆ. ಅದಕ್ಕೆ ಮುನಿಗಳು, ರಾಮನೆಂದರೆ ದೇವರು, ನೀನು ಅವರನ್ನು ಹುಡುಕಿ ಹೋಗುವುದು ಬೇಡ. ಅವರೇ ನಿನ್ನನ್ನು ಹುಡುಕಿ ಬರುತ್ತಾರೆ. ಅವರಿಂದಲೇ ನಿನಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.
ಅಂದಿನಿಂದ ಶಬರಿ ರಾಮನಿಗಾಗಿ ಕಾಯುತ್ತ, ಹೂವು ಹಣ್ಣುಗಳನ್ನು ತಂದಿಡುತ್ತಿದ್ದಳು. ಅವರು ಬೇಲದ ಹಣ್ಣನ್ನು ತರುವಾಗ, ಅದರ ರುಚಿ ನೋಡಿ, ಸಿಹಿಯಾದ ಹಣ್ಣನ್ನಷ್ಟೇ ರಾಮನಿಗೆ ಕೊಡಬೇಕು ಎಂದದು ತೆಗೆದಿಡುತ್ತಿದ್ದಳು. ಒಮ್ಮೆ ರಾಮ ಕುಟೀರಕ್ಕೆ ಬಂದೇ ಬಿಟ್ಟ, ಶಬರಿದೆ ದರ್ಶನ ನೀಡಿದ.
ಆಕೆ ರಾಮನಿಗಾಗಿ ತಂದಿಟ್ಟ ಬೇಲದ ಹಣ್ಣನ್ನು ರಾಮ ಲಕ್ಷ್ಮಣ ಇಬ್ಬರಿಗೂ ನೀಡಿದಳು. ರಾಮನಿಗೆ ಆಕೆ ನೀಡಿದ ಹಣ್ಣು ಎಂಜಿಲು ಮಾಡಿದ್ದು ಎಂದು ಗೊತ್ತಿದ್ದರೂ, ಅದನ್ನು ಪ್ರೀತಿಯಿಂದ ಸ್ವೀಕರಿಸಿದ. ಬಳಿಕ ಶಬರಿಗೆ ಮೋಕ್ಷ ನೀಡಿದ.