ನಾವು ನೀವು ಓದಿರುವ ಮಹಾಭಾರತ ಕಥೆಯಲ್ಲಿ ಅರ್ಜುನ ಸೇರಿ ಪಾಂಡವರೆಲ್ಲ, ನಡೆಯುತ್ತ ಸ್ವರ್ಗಕ್ಕೆ ಹೋಗುವಾಗ ಒಬ್ಬೊಬ್ಬರಾಗಿಯೇ ಮರಣ ಹೊಂದಿದರು. ಕೊನೆಗೆ ನಾಯಿಯೊಂದಿಗೆ ಯುಧಿಷ್ಠಿರನೊಬ್ಬನೇ ಸ್ವರ್ಗಕ್ಕೆ ಹೋದ ಎಂದು ಓದಿದ್ದೆವು. ಆದ್ರೆ ಇಂಥ ಇನ್ನೂ ಪೌರಾಣಿಕ ಪುಸ್ತಕಗಳಲ್ಲಿ ಅರ್ಜುನನ ಬಗ್ಗೆ ವಿವಿಧ ರೀತಿಯ ಕಥೆಗಳಿದೆ. ಅದರಲ್ಲಿ ಅರ್ಜುನನ ರುಂಡವನ್ನು ಕತ್ತರಿಸಲಾಯಿತು ಅಂತ ಬರೆಯಲಾಗಿದೆ. ಇದರ ಬಗ್ಗೆ ಒಂದು ಪ್ರಸಿದ್ಧ ಸಿನಿಮಾನೂ ಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಮಹಾಭಾರತ ಯುದ್ಧದ ಬಳಿಕ ಹಸ್ತಿನಾಪುರಕ್ಕೆ ಯುಧಿಷ್ಠಿರ ರಾಜನಾದ. ನಂತರ ಋಷಿಗಳು ಸೇರಿ, ಅಶ್ವಮೇಧ ಯಾಗ ಶುರು ಮಾಡಿದರು. ಅಶ್ವ ತನ್ನ ಕಲನೆ ಶುರು ಮಾಡಿತು. ಹಲವು ರಾಜರು ಯುದ್ಧ ಮಾಡಲು ಒಪ್ಪದೇ, ಪರಾಜಿತರಾದರು. ಆದರೆ ಯಾರು ಯುದ್ಧ ಸ್ವೀಕರಿಸುತ್ತಾರೋ, ಅವರು ಅರ್ಜುನನೊಂದಿಗೆ ಯುದ್ಧ ಮಾಡಿ ಅವನನ್ನು ಸೋಲಿಸಬೇಕಾಗಿತ್ತು.
ಒಮ್ಮೆ ಅಶ್ವ ಮಣಿಪುರಕ್ಕೆ ಹೋಯಿತು. ಅಲ್ಲಿ ಅರ್ಜುನ ಮತ್ತು ಚಿತ್ರಾಂಗದೆಯ ಪುತ್ರ ಬಬ್ರುವಾಹನ ಆ ರಾಜ್ಯದ ರಾಜನಾಗಿದ್ದ. ಅವನಿಗೆ ತನ್ನ ಅಪ್ಪ ಅಶ್ವಮೇಧ ಯಾಗ ಮಾಡುತ್ತಿರುವುದು ಎಂದು ಗೊತ್ತಾಯಿತು. ಅಪ್ಪನ ಸ್ವಾಗತ ಮಾಡಲು ಹೋದ. ಆದರೆ ಅರ್ಜುನ ಬಬ್ರುವಾಹನನ್ನು ದೂರ ನಿಲ್ಲಿಸಿದ. ಮತ್ತು ಹೀಗೆಂದ. ನಾನೀಗ ನಿನ್ನ ಅಪ್ಪನಲ್ಲ. ಬದಲಾಗಿ ಈ ಅಶ್ವಮೇಧ ಯಾಗದ ಪ್ರತಿನಿಧಿಯಾಗಿದ್ದೇನೆ. ಹಾಗಾಗಿ ನೀನು ನನ್ನೊಂದಿಗೆ ಯುದ್ಧ ಮಾಡಬೇಕು ಎನ್ನುತ್ತಾನೆ.
ಅಷ್ಟೊತ್ತಿಗೆ ಅಲ್ಲಿಗೆ ಅರ್ಜುನನ ಇನ್ನೋರ್ವ ಪತ್ನಿ ಉಲೂಪಿ ಅಲ್ಲಿಗೆ ಬಂದು, ಬಬ್ರುವಾಹನನಲ್ಲಿ ಯುದ್ಧ ಮಾಡಲು ಹೇಳುತ್ತಾಳೆ. ಅರ್ಜುನ ಮತ್ತು ಬಬ್ರುವಾಹನನ ನಡುವೆ ಯುದ್ಧವಾಗುತ್ತದೆ. ಬಬ್ರುವಾಹನ ಅರ್ಜುನನ್ನು ಸೋಲಿಸಿ, ಕೊಲ್ಲುತ್ತಾನೆ. ಬಬ್ರುವಾಹನನಿಗೆ ಮತಿ ತಪ್ಪುತ್ತದೆ. ನಂತರ ಎಚ್ಚರವಾದಾಗ, ತಾನು ಅಪ್ಪನನ್ನೇ ಕೊಂದಿರುವುದು ಗೊತ್ತಾಗುತ್ತದೆ. ವಿಷಯ ತಿಳಿದ ಚಿತ್ರಾಂಗದೆ ಸ್ಥಳಕ್ಕೆ ಬರುತ್ತಾರೆ. ಇಬ್ಬರೂ ದುಃಖ ಪಡುತ್ತಾರೆ. ಮತ್ತು ಇಬ್ಬರೂ ಆಮರಣಾಂತ ಉಪವಾಸ ಮಾಡುತ್ತಾರೆ.
ಆಗ ಉಲೂಪಿ ಸಂಜಿವಿನಿ ಮಣಿಯನ್ನ ನೆನೆಯುತ್ತಾಳೆ. ಸಂಜೀವಿನಿ ಮಣಿ ಪ್ರತ್ಯಕ್ಷವಾಗುತ್ತದೆ. ಬಬ್ರುವಾಹನ ಆ ಮಣಿಯನ್ನು ಅರ್ಜುನನ ಎದೆಯ ಮೇಲೆ ಇಡುತ್ತಾನೆ. ಅರ್ಜುನ ಮತ್ತೆ ಜೀವಂತವಾಗುತ್ತಾನೆ. ಆಗ ಬಬ್ರುವಾಹನ ಅರ್ಜುನನಲ್ಲಿ ಕ್ಷಮೆ ಕೇಳುತ್ತಾನೆ. ಇಬ್ಬರೂ ಹಸ್ತಿನಾಪುರಕ್ಕೆ ಹೋಗಿ, ಅಶ್ವಮೇಧ ಯಾಗದಲ್ಲಿ ಭಾಗಿಯಾಗುತ್ತಾರೆ.