Saturday, June 21, 2025

Latest Posts

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ 6 ವಸ್ತುವನ್ನು ಬಳಸಿ- ಭಾಗ 1

- Advertisement -

ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ತಪ್ಪು ಮಾಡೇ ಮಾಡ್ತಾನೆ. ಹಾಗಾಗಿ ಈ ಪ್ರಪಂಚದಲ್ಲಿ ತಪ್ಪೇ ಮಾಡದ ಮನುಷ್ಯನನ್ನು ಹುಡುಕಲು ಸಾಧ್ಯವೇ ಇಲ್ಲ. ಅದರಲ್ಲೂ ಅವಶ್ಯಕತೆ ಇಲ್ಲದ ವಿಚಾರದ ಬಗ್ಗೆ ಮಾತನಾಡಿದಾಗ, ಅವಶ್ಯಕತೆ ಇಲ್ಲದ ಕೆಲಸವನ್ನು ಮಾಡಿದಾಗ, ಅವಶ್ಯಕತೆ ಇಲ್ಲದ ಮನುಷ್ಯರ ಸಂಗ ಮಾಡಿದಾಗಲೇ ತಪ್ಪು ನಡೆದು ಹೋಗೋದು. ಹಾಗಾಗಿ ಚಾಣಕ್ಯರು ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ 6 ವಸ್ತುವನ್ನು ಬಳಸಿ ಎಂದಿದ್ದಾರೆ. ಹಾಗಾದ್ರೆ ಮನುಷ್ಯ ಬೇಕಾದರಷ್ಟೇ ಬಳಸಬಹುದಾದ ಆ 6 ವಸ್ತುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದ್ದು ಕುಟುಂಬ. ಮನುಷ್ಯನ ಕುಟುಂಬದಲ್ಲಿ ನಾಲ್ಕು ವಿಧಗಳಿದೆ. ಒಂದು ತಂದೆ ಮನೆ ಕುಟುಂಬ, ಎರಡನೇಯದ್ದು ತಾಯಿ ಮನೆ ಕುಟುಂಬ. ಮೂರನೇಯದ್ದು ನಿಮ್ಮ ಅಪ್ಪ ಅಮ್ಮ ಸೇರಿದಾಗ ಸೃಷ್ಟಿಯಾದ ಪರಿವಾರ. ನಾಲ್ಕನೇಯದ್ದು ನೀವು ನಿಮ್ಮ ಸಹಪಾಠಿ ಜೊತೆ ನಡೆಸುವ ಸಂಸಾರ. ಇವಿಷ್ಟು ಜನರಲ್ಲಿ ಯಾರಾದರೂ ಒಬ್ಬರು ಉಚ್ಛ ಸ್ಥಾನದಲ್ಲಿರುತ್ತಾರೆ. ಅಥವಾ ನೀಚ ಕೆಲಸ ಮಾಡಿರುತ್ತಾರೆ. ಇವೆರಡರಲ್ಲಿ ಯಾವ ವಿಷಯವನ್ನೂ ನೀವು ಹೊರಗೆ ಹೇಳಬಾರದು. ಅವಶ್ಯಕತೆ ಇದ್ದರೆ ಮಾತ್ರ, ಆ ಉಚ್ಛ ವ್ಯಕ್ತಿ ಅಥವಾ ನೀಚ ಕೆಲಸ ಮಾಡಿದವರು ನಿಮ್ಮ ಕುಟುಂಬಸ್ಥರು ಎಂದು ಹೇಳಬಹುದು.

ಯಾಕಂದ್ರೆ ನಿಮ್ಮ ಕುಟುಂಬದಲ್ಲಿ ಉಚ್ಛ ವ್ಯಕ್ತಿಗಳಿದ್ದಾರೆ ಅಂದರೆ, ನೀವು ಯಾವ ಕೆಲಸವೇ ಮಾಡಿದರೂ, ಅದಕ್ಕೆ ಜನ ಬೆಲೆ ಕೊಡುವುದಿಲ್ಲ. ನೀವೆಷ್ಟೇ ಕಷ್ಟಪಟ್ಟು ಆ ಕೆಲಸ ಗಿಟ್ಟಿಸಿಕೊಂಡಿದ್ದರೂ, ಅದು ಯಾರಿಗೂ ಗೊತ್ತಾಗುವುದಿಲ್ಲ. ಬದಲಾಗಿ ಅವವರು, ನಿನಗೇನು ಬಿಡು. ನಿಮ್ಮ ಮನೆಯಲ್ಲಿ ಅಷ್ಟು ಫೇಮಸ್ ವ್ಯಕ್ತಿ ಇದ್ದಾರೆ, ನಿನಗೆ ಕಷ್ಟಪಡುವ ಅವಶ್ಯಕತೆಯೇ ಇಲ್ಲ. ಎಲ್ಲವೂ ಆರಾಮಾಗಿಯೇ ಸಿಗುತ್ತದೆ ಎಂದು ಹೇಳುತ್ತಾರೆ. ಇನ್ನು ತುಚ್ಛ ವ್ಯಕ್ತಿ ಇದ್ದರೆ, ನಿಮಗೆ ಜನ ಗೌರವ ನೀಡುವುದಿಲ್ಲ. ಹಾಗಾಗಿ ಇವೆರಡೂ ಜನರ ಬಗ್ಗೆ ಅವಶ್ಯಕತೆ ಇಲ್ಲದೇ, ಎಲ್ಲಿಯೂ ಹೇಳಬಾರದು.

ಎರಡನೇಯದು ಶರೀರ. ಶರೀರದ ಅರ್ಥವೆಂದರೆ, ಶರೀರದ ಸೌಂದರ್ಯ ಮತ್ತು ಶರೀರದ ಶಕ್ತಿ. ನಮ್ಮ ದೇಹವನ್ನು ಆರೋಗ್ಯಯುತ, ಶಕ್ತಿಯುತ, ಸುಂದರವಾಗಿ ಇರಿಸಲು ಏನೇನು ಕಸರತ್ತು ಮಾಡಬೇಕೋ ಅದೆಲ್ಲ ಖಂಡಿತ ಮಾಡಬೇಕು. ಆದ್ರೆ ನಾನು ಶಕ್ತಿವಂತ, ನಾನು ಸೌಂದರ್ಯವತಿ ಎಂದು ಸಿಕ್ಕ ಸಿಕ್ಕಲೆಲ್ಲ ನಿಮ್ಮ ಶಕ್ತಿ ಮತ್ತು ಸೌಂದರ್ಯ ಪ್ರದರ್ಶನ ಮಾಡಬಾರದು. ಅದನ್ನ ಅವಶ್ಯಕತೆ ಇದ್ದಲ್ಲಿ ಮಾತ್ರ ಪ್ರದರ್ಶಿಸಬೇಕು.

ಮೂರನೇಯದ್ದು ವಿದ್ಯೆ. ನೀವು ವಿದ್ಯಾವಂತರಾಗಿದ್ದರೆ, ನಿಮ್ಮ ಎದುರಿನವರು ನಿಮಗಿಂತ ಹೆಚ್ಚು ವಿದ್ಯಾವಂತರು, ಹೆಚ್ಚು ಬುದ್ಧಿವಂತರಿರುತ್ತಾರೆ. ಅವರ ಮುಂದೆ ನೀವು ನಿಮ್ಮ ವಿದ್ಯೆ ಪ್ರದರ್ಶನ ಮಾಡಿದರೆ, ಅವರು ನಾನು ನಿನಗಿಂತ ಬುದ್ಧಿವಂತ, ನೀನೇನು ನನಗೆ ಹೇಳಿಕೊಡೋದು ಅಂತಾ, ನಿಮ್ಮನ್ನ ಕೆಳಮಟ್ಟಕ್ಕಿಳಿಸುತ್ತಾರೆ. ಇನ್ನು ನಿಮ್ಮಷ್ಟೇ ವಿದ್ಯೆ ಕಲಿತ, ನಿಮ್ಮಷ್ಟೆ ಬುದ್ಧಿವಂತರ ಬಳಿ ನಿಮ್ಮ ವಿದ್ಯೆ ಪ್ರದರ್ಶಿಸಿದರೆ, ಇದು ನನಗೂ ಗೊತ್ತು ಎಂದು ಅವರು ಹೀಯಾಳಿಸುತ್ತಾರೆ. ಇನ್ನು ನಿಮಗಿಂತ ದಡ್ಡರ ಮುಂದೆ ನಿಮ್ಮ ವಿದ್ಯೆ ಪ್ರದರ್ಶಿಸಿದರೆ, ಇವನಿಗೆ ವಿದ್ಯೆ ಇದೆ ಅಂತ, ಇಲ್ಲಿ ಕೊಚ್ಚಿಕೊಳ್ಳೋಕ್ಕೆ ಬಂದಿದ್ದಾನೆ ಎಂದು ಹೇಳುತ್ತಾರೆ. ಹಾಗಾಗಿ ನಿಮ್ಮ ವಿದ್ಯೆಯನ್ನ ಕಂಡ ಕಂಡಲ್ಲಿ ತೋರಿಸಬಾರದು. ಬದಲಾಗಿ ಅವಶ್ಯಕತೆ ಇದ್ದಲ್ಲಿ ಮಾತ್ರ, ವಿದ್ಯೆ ತೋರ್ಪಡಿಸಬೇಕು.

ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss