ಹಿಂದೂ ಧರ್ಮದಲ್ಲಿ ಶುಭ ಸಮಾರಂಭದ ವೇಳೆ, ಅಥವಾ ಹಬ್ಬದ ದಿನ, ಊರಿಗೆ ಹೋಗುವ ವೇಳೆ, ಹೀಗೆ ಆಯಾ ಸಮಯದಲ್ಲಿ ಹಿರಿಯರ ಕಾಲಿಗೆ ಬಿದ್ದು, ಆಶೀರ್ವಾದ ಪಡೆಯುವ ಪದ್ಧತಿ ಇದೆ. ಹಿಂದಿನ ಕಾಲದಲ್ಲಿ ಇದೆಲ್ಲವನ್ನು ಅನುಸರಿಸಿಕೊಂಡು ಬರುತ್ತಿದ್ದರು. ಈಗೀಗ ಹಿರಿಯರ ಕಾಲಿಗೆ ಎರಗಿ, ಆಶೀರ್ವಾದ ಪಡೆಯುವುದು ಕಡಿಮೆಯಾಗುತ್ತಿದೆ. ಕೆಲವರಂತೂ ಶೋಕಿಗಾಗಿ ಸೊಂಟ ಬಗ್ಗಿಸಿ, ಆಶೀರ್ವಾದ ಪಡೆಯುತ್ತಾರೆ. ಅವರ ಕೈ ಹಿರಿಯರ ಕಾಲಿಗೂ ತಾಕಿರುವುದಿಲ್ಲ. ಆದರೆ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅಂತಾ ಹೇಳಲು ಕೆಲವು ಉತ್ತಮ ಕಾರಣಗಳಿದೆ. ಅದೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದರೆ, ಅದು ಅವರಿಗೆ ಕೊಡುವ ಗೌರವವಾಗುತ್ತದೆ. ಅಲ್ಲದೇ, ನಮ್ಮ ಮಾನಸಿಕ ಶಕ್ತಿ ಹೆಚ್ಚುತ್ತದೆ. ಅವರ ಆಶೀರ್ವಾದದಿಂದ ನಮಗೆ ಸಕಾರಾತ್ಮಕ ಶಕ್ತಿ ಪ್ರಾಪ್ತಿಯಾಗುತ್ತದೆ. ಇದರಿಂದ ನಮ್ಮ ಮಾನಸಿಕ ಬೆಳವಣಿಗೆ ಉತ್ತಮವಾಗಿ ಆಗಲು ಸಹಕಾರಿಯಾಗುತ್ತದೆ ಅನ್ನೋ ನಂಬಿಕೆ ಇದೆ.
ಅಲ್ಲದೇ, ಹಿರಿಯರ ಚರಣ ಸ್ಪರ್ಶದಿಂದ, ಗ್ರಹಗತಿಗಳು ಕೂಡ ಉತ್ತಮವಾಗಿ ಬದಲಾಗುತ್ತದೆ ಅನ್ನೋ ನಂಬಿಕೆ ಇದೆ. ಮನುಷ್ಯ ವಿದ್ಯೆ, ಬುದ್ಧಿಯಲ್ಲಿ ಪರಿಣಿತಿ ಹೊಂದಲಿ ಎಂಬ ಕಾರಣಕ್ಕೆ, ಮಾಡಿರುವ ಸನಾತನ ಪದ್ಧತಿ ಇದಾಗಿದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದ್ದು, ನೀವು ಪ್ರತಿದಿನ ಹಿರಿಯರ ಕಾಲಿಗೆರಗಿ ನಮಸ್ಕರಿಸಿದರೆ, ನಿಮ್ಮ ನೆನಪಿನ ಶಕ್ತಿ ಚೆನ್ನಾಗಿರುತ್ತದೆ. ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಹಾಗಾಗಿ ಹಿಂದೂ ಧರ್ಮದಲ್ಲಿ ಪ್ರತಿದಿನ ಯಾರಿಗಲ್ಲದಿದ್ದರೂ, ದೇವರಿಗಾದರೂ, ನೆಲಕ್ಕೆ ತಲೆಬಾಗಿ ನಮಸ್ಕರಿಸಬೇಕು ಅಂತಾ ಹೇಳಲಾಗಿದೆ.
ಇದು ಬರೀ ಒಂದು ಪದ್ಧತಿ ಅಲ್ಲದೇ, ವ್ಯಾಯಾಮ ಕೂಡ ಆಗಿದೆ. ಹಾಗಾಗಿಯೇ ಹಬ್ಬ ಹರಿದಿನಗಳಲ್ಲಿ, ಶುಭ ಸಮಾರಂಭಗಳಲ್ಲಿ, ಭಾಗಿಯಾದ ಎಲ್ಲ ಹಿರಿಯರ ಚರಣಕ್ಕೂ ನಮಸ್ಕರಿಸಬೇಕು ಎಂಬ ನಿಯಮವಿದೆ.